30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಮುಂಡಗೋಡ,ಜೂ.14- ಕಳೆದ 30 ವರ್ಷಗಳ ಹಿಂದೆ ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಪರಾರಿಯಾಗಿದ್ದವನನ್ನು ಇಲ್ಲಿನ ಪೊಲೀಸರು ಆಂಧ್ರ ಪ್ರದೇಶದಲ್ಲಿ ಬಂಧಿಸಿ ನಿನ್ನೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೊಳ್ಳೆಗಾಲ ಸಮೀಪದ ಗೋಪಿನಾಥಪುರ ನಿವಾಸಿ ಮೈಸೂರ ಮಾದಪ್ಪಾ (52) ಬಂಧಿತ ಆರೋಪಿ.
ಈತ 30 ವರ್ಷಗಳ ಹಿಂದೆ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ ತಮಿಳನಾಡಿನ ಗೋಪಿನಾಥ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. 30 ವರ್ಷಗಳ ಹಿಂದೆ ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಈ ಪ್ರಕರಣದಲ್ಲಿ ಜಾಮೀನು ಪಡೆದು ನಾಪತ್ತೆಯಾಗಿದ್ದ.
ನ್ಯಾಯಾಲಯಕ್ಕೆ ಹಾಜರಾಗದಿರುವುದರಿಂದ ನ್ಯಾಯಾಲಯವು ವಾರೆಂಟ್ ಜಾರಿ ಮಾಡಿತ್ತು. ನ್ಯಾಯಾಲಯದ ಆದೇಶದಂತೆ ಇಲ್ಲಿನ ಪೊಲೀಸರು ಈತನ ಪತ್ತೆಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ ಆಂಧ್ರ ಪ್ರದೇಶದ ಬೆಳ್ಳಿಕುರವಾ ಗ್ರಾಮದಲ್ಲಿ ಇದ್ದ ಬಗ್ಗೆ ಮಾಹಿತಿ ಕಲೆ ಹಾಕಿ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪಿಐ ಕಿರಣಕುಮಾರ್ ನಾಯಕ್ ನೇತೃತದಲ್ಲಿ ಪಿಎಸ್ಐ ಲಕ್ಕಪ್ಪ ನಾಯಕ, ಎಎಸ್ಐ ಅಶೋಕ ರಾಠೋಡ, ಕಾನ್ಸ್ಟೆಬಲ್ ಶಿವರಾಜ ಚೌವ್ಹಾಣ, ಖಾನ ಆರೋಪಿಯನ್ನು ಹಿಡಿಯುವಲ್ಲಿ ಶ್ರಮಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS