ಶೀಲ ಶಂಕಿಸಿ ಪತ್ನಿಯನ್ನು ಇರಿದು ಕೊಂದ ಪತಿ
ಬೆಂಗಳೂರು, ನ.27- ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶೀಲ ಶಂಕಿಸಿದ ಪತಿ ಚಾಕುವಿನಿಂದ ಇರಿದು ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಪದ್ಮನಾಭನಗರದ ಮೊದಲನೇ ಮುಖ್ಯರಸ್ತೆ ನಿವಾಸಿ ಇಂದಿರಾ(36) ಕೊಲೆಯಾದ ನತದೃಷ್ಟೆ. ಸಿಮ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಮಲ್ಲೇಶ್ ಎಂಬಾತ 12 ವರ್ಷಗಳ ಹಿಂದೆ ಆಸ್ಪತ್ರೆ (ಔಷಧಿ) ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಇಂದಿರಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ 9 ವರ್ಷದ ಮಗಳಿದ್ದಾಳೆ.
ಕೆಲ ತಿಂಗಳುಗಳಿಂದ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಹಾಗಿಂದಾಗ್ಗೆ ಪತಿ ಜಗಳವಾಡುತ್ತಿದ್ದನು. ಇಂದು ಮುಂಜಾನೆಯೂ ಇದೇ ವಿಷಯವಾಗಿ ಪತಿ-ಪತ್ನಿ ನಡುವೆ ಜಗಳ ನಡೆದು ಒಂದು ಹಂತದಲ್ಲಿ ಇಂದಿರಾ ಕುತ್ತಿಗೆ ಹಿಸುಕಿ ನಂತರ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಸುದ್ದಿ ತಿಳಿದ ಬನಶಂಕರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.