ಗಂಗಾ ಕಲ್ಯಾಣ ಯೋಜನೆ ವಿಫಲ ಆರೋಪದ ಬಗ್ಗೆ ಶಾಸಕ ಕಿಡಿ
ಚಿಕ್ಕಬಳ್ಳಾಪುರ,ಆ.11-ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿರುವುದರಿಂದ ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ವಿಫಲರಾಗಿರುವ ಬಗ್ಗೆ ಆರೋಪಿಸಿದವರಿಗೆ ಇದು ಉತ್ತರವಾಗಿದೆ ಎಂದು ಶಾಸಕ ಡಾ.ಕೆ.ಸುಧಾಕರ್ ತಿರುಗೇಟು ನೀಡಿದರು.ನಗರದ ತಮ್ಮ ಕಚೇರಿಯಲ್ಲಿ ಫಲಾನುಭವಿಗಳೊಂದಿಗೆ ಚರ್ಚೆ ನಡೆಸಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2013-14 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ 15 ಫಲಾನುಭವಿಗಳು ಮತ್ತು 12 ಪರಿಶಿಷ್ಟ ಪಂಗಡದ ಫಲಾನುಭವಿಗಳು, 2014-15ನೇ ಸಾಲಿನಲ್ಲಿ 23 ಪರಿಶಿಷ್ಟ ಜಾತಿಯ ಫಲಾನುಭವಿಗಳು ಮತ್ತು 10 ಪರಿಶಿಷ್ಟ ಪಂಗಡ ಫಲಾನುಭವಿಗಳು ಗಂಗಾ ಕಲ್ಯಾಣ ಯೋಜನೆಗೆ ಆಯ್ಕೆಯಾಗಿ ಕೊಳವೆ ಬಾವಿಯನ್ನು ಕೊರೆಸಿಕೊಂಡಿದ್ದಾರೆ. ನೀರು ಸಿಕ್ಕಿದ ಹಿನ್ನೆಲೆಯಲ್ಲಿ ಸಂತಸಗೊಂಡಿದ್ದಾರೆ. ಆದರೆ, ಕೆಲವರು ಗಂಗಾ ಕಲ್ಯಾಣ ಯೋಜನೆಯಲ್ಲಿ ಒಂದೇ ಕೊಳವೆ ಬಾವಿಯನ್ನು ಕೊರೆಸದೇ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದೆಲ್ಲಾ ಟೀಕಿಸಿದ್ದರು.ಆದರೆ ಇವೆಲ್ಲ ಸುಳ್ಳು. ಈ ಹಿಂದೆ ಕೊಳವೆ ಬಾವಿಯನ್ನು ಕೊರೆಸಲು ವಿಳಂಬ ಮಾಡಿ ಫಲಾನುಭವಿಗಳನ್ನು ಸತಾಯಿಸಿದಂತಹ ನಿದರ್ಶನಗಳಿವೆ. ಆದರೆ, ಕೆಲ ಲೋಪಗಳನ್ನು ಸರಿಪಡಿಸಿ ಹಲವರಿಗೆ ಕೊಳವೆ ಬಾವಿಗಳನ್ನು ಕೊರೆಸಿಕೊಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
► Follow us on – Facebook / Twitter / Google+