ಜೆಡಿಎಸ್ 8 ಶಾಸಕರ ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿಗೆ ನೋಟಿಸ್
ಬೆಂಗಳೂರು, ಆ.27-ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದ್ದ ಜೆಡಿಎಸ್ ನ ಎಂಟು ಮಂದಿ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷರ ಅರೆನ್ಯಾಯಿಕ ಪ್ರಾಧಿಕಾರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಜೆಡಿಎಸ್ ಶಾಸಕರಾದ ಸಿ.ಎನ್.ಬಾಲಕೃಷ್ಣ ಮತ್ತು ಬಿ.ಬಿ.ನಿಂಗಯ್ಯ ಅವರು ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಿ ಶಾಸಕರಾದ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಮತ್ತು ಇತರೆ ಏಳು ಮಂದಿ ಶಾಸಕರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಕೋರಿದ್ದರು.
ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿರುವ ಪ್ರಾಧಿಕಾರವು ಕುಮಾರಸ್ವಾಮಿಯವರಿಗೆ ನೋಟಿಸ್ ನೀಡಿ ಏಳು ದಿನಗಳ ಒಳಗೆ ಲಿಖಿತವಾಗಿ ತಮ್ಮ ಹೇಳಿಕೆಯನ್ನು ನೀಡುವಂತೆ ಸೂಚಿಸಿದೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ನ ಅಧಿಕೃತ ಅಭ್ಯರ್ಥಿಗೆ ಬದಲಾಗಿ ಬೇರೊಬ್ಬ ಅಭ್ಯರ್ಥಿಗೆ ಮತ ಚಲಾಯಿಸಿರುವ ಎಂಟು ಮಂದಿ ಶಾಸಕರನ್ನು ಅನರ್ಹಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ವಾದವನ್ನು ಈಗಾಗಲೇ ಆಲಿಸಿರುವ ಸಭಾಧ್ಯಕ್ಷ ಕೆ.ಬಿ.ಕೋಳಿವಾಡರವರು ಕುಮಾರಸ್ವಾಮಿ ಹೇಳಿಕೆಯನ್ನು ಪಡೆಯಲು ನೋಟಿಸ್ ನೀಡಿದ್ದಾರೆ. ಆ.25ರಂದು ನೋಟಿಸ್ ನೀಡಲಾಗಿದ್ದು , ನೋಟಿಸ್ ತಲುಪಿದ್ದ ಏಳು ದಿನಗಳ ಒಳಗೆ ಲಿಖಿತ ಹೇಳಿಕೆ ನೀಡಬೇಕೆಂದು ಸೂಚಿಸಲಾಗಿದೆ.
► Follow us on – Facebook / Twitter / Google+