ದಡಾರ-ರುಬೆಲ್ಲಾ ಲಸಿಕಾ ಅಭಿಯಾನ
ಬಾಗಲಕೋಟೆ,ಫೆ.18- ದಡಾರ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಕೆಮ್ಮು ಮತ್ತು ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರ ನಿಮ್ಮ ಮಗುವನ್ನು ನ್ಯಮೋನಿಯಾ, ಅತಿಸಾರ ಬೇದಿ, ಮೆದುಳಿನ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗಿಸಬಹುದು. ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ದಡಾರದ ಮುಖ್ಯ ಲಕ್ಷಣಗಳು.ರುಬೆಲ್ಲಾ ರೋಗವು ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಜನ್ಮತಃ ಗ್ಲುಕೋಮಾ, ಕಣ್ಣಿನಪೊರೆ, ಕಿವುಡುತನ, ಮೆದುಳು ಜ್ವರ, ಮಾನಸಿಕ ಅಸ್ವಸ್ಥತೆ, ಬುದ್ಧಿ ಮಾಂಧ್ಯತೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಈಡು ಮಾಡಬಹುದು ಎಂದು ವೈದ್ಯಾಧಿಕಾರಿ ಡಾ. ಎಂ.ಎಂ. ಪತ್ತಾರ ಲಸಿಕಾ ಕಾರ್ಯಕ್ರಮದಲ್ಲಿ ಸಲಹೆ ನೀಡಿದರು.
ರುಬೆಲ್ಲಾ ವೈರಸ್ ಗರ್ಭಪಾತಕ್ಕೂ ಸಹ ಕಾರಣವಾಗಬಹುದು ಎಂದು ಈ ಸಂದರ್ಭದಲ್ಲಿ ತಿಳುವಳಿಕೆ ನೀಡಿದರು. ದಡಾರ- ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಲಸಿಕೆಯನ್ನು ಒಂದು ವಿಶೇಷ ಅಭಿಯಾನದ ಮೂಲಕ ಶ್ರೀ ಮಂಜುನಾಥ ಹಿರಿಯ ಪ್ರಾಥಮಿಕ ಶಾಲೆ ಮುರನಾಳದಲ್ಲಿ 9 ತಿಂಗಳಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳು ಎಂದರೆ 1ರಿಂದ 7ನೇ ತರಗತಿ ಮಕ್ಕಳಿಗೆ ಈ ಲಸಿಕೆ ನೀಡಲಾಯಿತು.ಶಾಲಾ ಮಖ್ಯಗುರು ಟಿ.ಎಚ್. ಸನಗಿನ ಹಾಗೂ ಶಾಲಾ ಸಿಬ್ಬಂಧಿ ವರ್ಗ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಹಿರಿಯ ಆರೋಗ್ಯ ಸಹಾಯಕ ಪಿ.ಎಮ್. ಇಟಗಿ, ಕಿರಿಯ ಆರೋಗ್ಯ ಸಹಾಯಕಿ ಎಸ್.ಎಚ್. ಮಾದರ, ಹಾಗೂ ಕಿರಿಯ ಆರೋಗ್ಯ ಸಹಾಯಕಿ ಎಸ್.ಎಸ್. ಕುಲಕರ್ಣಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS