ನಾಗನ ವಿರುದ್ಧ ಮತ್ತೊಂದು ದೂರು ದಾಖಲು
ಬೆಂಗಳೂರು, ಮೇ 20-ಬ್ಲ್ಯಾಕ್ ಅಂಡ್ ವೈಟ್ ದಂಧೆ ಪ್ರಕರಣದಲ್ಲಿ ಬಂಧಿತನಾಗಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ನ ವಿರುದ್ಧ ಮತ್ತೊಂದು ದರೋಡೆ ಪ್ರಕರಣ ದಾಖಲಾಗಿದೆ. ಹೆಬ್ಬಾಳದ ರಿಯಲ್ ಎಸ್ಟೇಟ್ ಉದ್ಯಮಿ ಬಿ.ಕೆ.ಶಿವಾನಂದ ಎಂಬುವರು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಿದ್ದಾರೆ. ಕಳೆದ ಡಿ.15 ರಂದು ಹಳೇ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿಕೊಳ್ಳಲು 95 ಲಕ್ಷ ರೂ. ಹಣದೊಂದಿಗೆ ನಾಗನ ಮನೆಗೆ ಹೋಗಿದ್ದೆ. ನಾಲ್ಕನೆ ಮಹಡಿಯಲ್ಲಿ ಮಾತುಕತೆ ನಡೆದಿದ್ದು, ನಾಗ ಹಣ ಕೊಟ್ಟು ಹೋಗು. ಆನಂತರ ಹೊಸ ನೋಟು ಕೊಡುತ್ತೇನೆ ಎಂದು ಹೇಳಿದ್ದ. ಹಣ ನೀಡಲು ನಾನು ಒಪ್ಪದಿದ್ದಾಗ ನಾಗ ಹಾಗೂ ಆತನ ಸಹಚರರು ಪಿಸ್ತೂಲಿನಿಂದ ಬೆದರಿಸಿ 95 ಲಕ್ಷ ರೂ. ಹಣ ಕಿತ್ತುಕೊಂಡು ಕಳುಹಿಸಿದರು ಎಂದು ದೂರಿನಲ್ಲಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ದರೋಡೆ, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗನ ವಿರುದ್ಧ ಈವರೆಗೆ ನೋಟು ಬದಲಾವಣೆ ಸಂಬಂಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಉದ್ಯಮಿ ಉಮೇಶ್ ಅವರ ಅಪಹರಣ ಹಾಗೂ ದರೋಡೆ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS