ನಾಳೆಯಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ
ಬೆಂಗಳೂರು, ನ.4- ಅನ್ನಭಾಗ್ಯ ಯೋಜನೆ ಯಡಿ ಪಡಿತರ ಧಾನ್ಯ ಸಾಗಿಸುವವರಿಗೆ 100 ಕೋಟಿಗೂ ಹೆಚ್ಚು ಬಾಕಿಯನ್ನು ನೀಡದ ಕಾರಣ ನಾಳೆಯಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಪ್ರಾರಂಭಿಸುತ್ತೇವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ. ಪಡಿತರ ಧಾನ್ಯ ಸಾಗಿಸುವವರಿಗೆ ನ.3ರೊಳಗೆ ಬಾಕಿ ಹಣ ಕೊಡುವಂತೆ ಗಡುವು ನೀಡಿದ್ದೆವು. ಆದರೆ ಸರ್ಕಾರ ಈ ಕ್ಷಣದವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದಾಗಿ ನಾಳೆಯಿಂದ ಪಡಿತರ ಧಾನ್ಯ ಸಾಗಣೆಯನ್ನು ನಿಲ್ಲಿಸಿ ಮುಷ್ಕರ ಮಾಡುತ್ತೇವೆ ಎಂದು ಈ ಸಂಜೆಗೆ ಅವರು ತಿಳಿಸಿದರು.
ರಾಜ್ಯಾದ್ಯಂತ ಆರು ಸಾವಿರ ಲಾರಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಎಲ್ಲಾ ಲಾರಿ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ ಎಂದು ಹೇಳಿದರು.
ಹಿಂದಿನ ಆಹಾರ ನಾಗರಿಕ ಪೂರೈಕೆ ಸಚಿವ ದಿನೇಶ್ಗುಂಡೂರಾವ್ ಹಾಗೂ ಹಾಲಿ ಸಚಿವ ಯು.ಟಿ.ಖಾದರ್ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯೊಂದಿಗೂ ಹಲವು ಬಾರಿ ಬೇಡಿಕೆಗಳನ್ನು ಈಡೇರಿಸುವಂತೆ ಚರ್ಚೆ ನಡೆಸಿದ್ದವು. ಸಚಿವರು, ಅಧಿಕಾರಿಗಳು ಒಪ್ಪಿದ್ದರು. ಆದರೆ ಈ ವರೆಗೆ ಹಣ ನೀಡಿಲ್ಲ ಎಂದು ಆರೋಪಿಸಿದರು.
ಸರ್ಕಾರ ಕೊಡುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಅದರಲ್ಲಿ 2014ರಿಂದಲೂ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈಗ ನಾವು ಏನು ಮಾಡಬೇಕು. ಅದಕ್ಕಾಗಿ ಮುಷ್ಕರ ಹಾದಿ ಹಿಡಿದಿದ್ದೇವೆ. 100 ಕೋಟಿಗೂ ಹೆಚ್ಚು ಬಾಕಿಯನ್ನು ನೀಡುವವರೆಗೂ ನಮ್ಮ ಮುಂದುವರೆಯಲಿದೆ ಎಂದು ಷಣ್ಮುಗಪ್ಪ ತಿಳಿಸಿದರು.
► Follow us on – Facebook / Twitter / Google+