ಪ್ರೇಮಿಗಳ ಮೇಲೆ ಸಂಬಂಧಿಕರು ಹಲ್ಲೆ, ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟ ಜೋಡಿ
ಬಳ್ಳಾರಿ, ಏ.5- ಪ್ರೇಮಿಗಳಿಬ್ಬರ ಮೇಲೆ ಸಂಬಂಧಿಕರು ಹಲ್ಲೆ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಗರಾಜ್ (18) ಹಾಗೂ ಈತನ ಪ್ರಿಯತಮೆ ಹಲ್ಲೆಯಿಂದ ಸಾವನ್ನಪ್ಪಿದ್ದಾರೆ. ನಾಗರಾಜ್ ಹಾಗೂ ಈತನ ಪ್ರಿಯತಮೆ ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರಿಗೆ ತಿಳಿದಿದೆ. ಯುವತಿಯ ಸಂಬಂಧಿಕರು ನಾಗರಾಜ್ನನ್ನು ತಮ್ಮ ಹೊಲಕ್ಕೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವಿಷಯ ತಿಳಿದ ಯುವತಿ ಸ್ಥಳಕ್ಕಾಗಮಿಸಿದ್ದು, ಹಲ್ಲೆಯನ್ನು ತಡೆಯಲು ಮುಂದಾಗಿದ್ದಾಳೆ.
ಈ ವೇಳೆ ಯುವತಿ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇತ್ತ ತೀವ್ರವಾಗಿ ಹಲ್ಲೆಗೊಳಗಾಗಿದ್ದ ನಾಗರಾಜ್ನನ್ನು ರಸ್ತೆಬದಿಯಲ್ಲಿ ಎಸೆದು ಸಂಬಂಧಿಕರು ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಗರಾಜ್ನನ್ನು ಗ್ರಾಮಸ್ಥರು ಮಣಿಪಾಲ್ನ ಕಸ್ತೂರಿ ಬಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತನೂ ಸಾವನ್ನಪ್ಪಿದ್ದಾನೆ. ನಾಗರಾಜ್ ಪೋಷಕರು ತಂಬ್ರಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS