ಬಿಬಿಎಂಪಿ ಪೌರಕಾರ್ಮಿಕರಿಗೆ ಬಿಸಿಯೂಟದ ಹೆಸರಿನಲ್ಲಿ ಹಳಸಿದ ಅನ್ನ ವಿತರಣೆ
ಬೆಂಗಳೂರು, ಮಾ.27-ಪೌರಕಾರ್ಮಿಕರಿಗೆ ನೀಡುವ ಬಿಸಿಯೂಟದ ಹೆಸರಿನಲ್ಲಿ ಹಳಸಿದ ಅನ್ನ ವಿತರಿಸಿರುವ ಘಟನೆ ಪಾಲಿಕೆ ಸಭೆಯಲ್ಲಿಂದು ಪ್ರತಿಧ್ವನಿಸಿತು. ಬಜೆಟ್ ಮೇಲಿನ ಚರ್ಚೆ ವೇಳೆ ಧರ್ಮರಾಯಸ್ವಾಮಿ ವಾರ್ಡ್ನ ಸದಸ್ಯೆ ಪ್ರತಿಭಾ ಧನರಾಜ್ ಮತ್ತು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಇಸ್ಕಾನ್ನಿಂದ ಪೌರಕಾರ್ಮಿಕರಿಗೆ ವಿತರಿಸಲಾಗುತ್ತಿರುವ ಅನ್ನ ಹಳಸಿದೆ ಎಂದು ಪೊಟ್ಟಣಗಳನ್ನು ಹಿಡಿದು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಪದ್ಮನಾಭರೆಡ್ಡಿ ಮಾತನಾಡಿ, ನಗರವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುವ ಪೌರಕಾರ್ಮಿಕರಿಗೆ ಬಿಸಿಯೂಟ ನೀಡುವುದು ಒಳ್ಳೆಯ ಯೋಜನೆ. ಆದರೆ ಈ ಯೋಜನೆ ಹೆಸರಿನಲ್ಲಿ ಹಳಸಿದ ಅನ್ನ ನೀಡುತ್ತಿರುವುದು ಎಷ್ಟು ಸರಿ. ಅವರ ಆರೋಗ್ಯದ ಗತಿ ಏನಾಗಬೇಕು ಎಂದು ಪ್ರಶ್ನಿಸಿದರು.
ಪಾಲಿಕೆ ಕೇಂದ್ರ ಕಚೇರಿ ಪಕ್ಕದಲ್ಲೇ ಇರುವ ಧರ್ಮರಾಯಸ್ವಾಮಿ ವಾರ್ಡ್ನಲ್ಲಿ ಇಂದುಬೆಳಗ್ಗೆ ಪೌರಕಾರ್ಮಿಕರಿಗೆ ವಿತರಿಸಲಾಗಿರುವ ಅನ್ನವಿದು. ಹಳಸಿ ಹೋಗಿದೆ. ಇದನ್ನು ತಿನ್ನುವುದಾದರೂ ಹೇಗೆ? ಎಂದು ಕಿಡಿಕಾರಿದ ಅವರು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಮತ್ತಿತರ ಕೆಲ ಸದಸ್ಯರು ದನಿಗೂಡಿಸಿ ನಮ್ಮ ವಾರ್ಡ್ಗಳಲ್ಲೂ ವಿತರಿಸಲಾಗಿದ್ದ ಬಿಸಿಬೇಳೆಬಾತ್ ಸಹ ಹಳಸಿತ್ತು. ಇನ್ನೂ ಕೆಲವು ಕಡೆ ಹಳಸಿದ ಅನ್ನವನ್ನು ಬಿಸಿ ಮಾಡಿ ಕೊಡುತ್ತಾರೆ ಎಂದು ದೂರಿದರು.
> ಬಿಬಿಎಂಪಿ ಪೌರಕಾರ್ಮಿಕರಿಗೆ ಬಿಸಿಯೂಟದ ಹೆಸರಿನಲ್ಲಿ ಹಳಸಿದ ಅನ್ನ
Read ; https://t.co/r79VXwb9ek#BBMP #Workers #Rice #Bengauru pic.twitter.com/MRhyGXDIEM— EeSanjeNews l ಈ ಸಂಜೆ (@eesanjenews) March 27, 2017
ಮೇಯರ್ ಜಿ.ಪದ್ಮಾವತಿ ಮಾತನಾಡಿ, ಪೌರಕಾರ್ಮಿಕರಿಗೆ ಹಳಸಿನ ಅನ್ನ ವಿತರಿಸಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಅಧಿಕಾರಿಗಳ ಸಭೆ ಕರೆದು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS