ಬಿಹಾರ ಮೂಲದ ವ್ಯಕ್ತಿಯನ್ನು ಇರಿದು ಕೊಂದಿದ್ದ ಮೂವರು ದರೋಡೆಕೋರ ಬಂಧನ
ತುಮಕೂರು, ಮಾ.23-ಬಿಹಾರ ಮೂಲದ ವ್ಯಕ್ತಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿ ಹಣ, ಮೊಬೈಲ್ ದೋಚಿದ್ದ ಮೂವರು ದರೋಡೆಕೋರರನ್ನು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಡಿ.ಎಂ.ಪಾಳ್ಯದ ಹರೀಶ್ (24), ಅಭಿಲಾಷ್(19) ಮತ್ತು ಕಾರ್ತಿಕ್ ಬಂಧಿತ ದರೋಡೆಕೋರರಾಗಿದ್ದು, ಇವರಿಂದ ಚಾಕು, ಮೊಬೈಲ್, ಆಟೋರಿಕ್ಷಾ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.ಮಾ.15 ರಂದು ರಾತ್ರಿ 8.45ರಲ್ಲಿ ಬಿಹಾರ ಮೂಲದ ಬಿಪಿನ್ಸಿಂಗ್, ಸ್ನೇಹಿತ ರಮಾಕಾಂತ ಸಹಾನಿ ಜೊತೆ ಮಾತನಾಡುತ್ತಾ ತೆರಳುತ್ತಿದ್ದಾಗ ಅಂತರಹಳ್ಳಿ ಕೈಗಾರಿಕಾ ಪ್ರದೇಶದ ಕಾಳೇಶ್ವರಿ ಆಯಿಲ್ ಕಾರ್ಖಾನೆ ರಸ್ತೆಯಲ್ಲಿ ಕಪ್ಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಇವರನ್ನು ಅಡ್ಡಗಟ್ಟಿದ್ದಾರೆ.’
ಏಕಾಏಕಿ ಮೊಬೈಲ್ ಹಾಗೂ ಹಣ ಕೊಡುವಂತೆ ಒತ್ತಾಯಿಸಿದಾಗ ಇವರು ನಿರಾಕರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದರೋಡೆಕೋರರು ರಮಾಕಾಂತ ಸಹಾನಿ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಮೊಬೈಲ್ ಮತ್ತು 150 ರೂ. ಕಿತ್ತುಕೊಂಡು ಪರಾರಿಯಾಗಿದ್ದರು.ತಕ್ಷಣ ರಮಾಕಾಂತ ಸಹಾನಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದನು.ಪ್ರಕರಣ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS