ಬೆಂಗಳೂರು ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ
ಬೆಂಗಳೂರು, ಡಿ.22-ಬೆಂಗಳೂರು ಪ್ರೆಸ್ಕ್ಲಬ್ ಪ್ರತಿವರ್ಷ ನೀಡುತ್ತಿರುವ ಪ್ರೆಸ್ಕ್ಲಬ್ ವರ್ಷದ ವ್ಯಕ್ತಿ ಹಾಗೂ ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ನಿನ್ನೆ ನಡೆದ ಪ್ರೆಸ್ಕ್ಲಬ್ ಕಾರ್ಯಕಾರಿ ಸಮಿತಿಯಲ್ಲಿ ಈ ಕೆಳಕಂಡ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಬಾರಿ ವಿಶೇಷವಾಗಿ ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಮನೆ ಮಾಡಿರುವ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಶ್ರೀ ಡಾ. ಶಿವಕುಮಾರಸ್ವಾಮೀಜಿಯವರನ್ನು ಶತಮಾನದ ಶ್ರೀಗಳೆಂದು ಅಭಿನಂದಿಸಲು ತೀರ್ಮಾನಿಸಲಾಗಿದೆ.
2017ನೆ ಸಾಲಿನ ಪ್ರೆಸ್ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಖ್ಯಾತ ನಟ ಪ್ರಕಾಶ್ರೈ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಈ ಕೆಳಕಂಡವರಿಗೆ ನೀಡಲು ನಿರ್ಧರಿಸಲಾಗಿದೆ. ಡಾ.ಎ.ಸೂರ್ಯಪ್ರಕಾಶ್ (ಅಧ್ಯಕ್ಷರು ಪ್ರಸಾರ ಭಾರತಿ ಮಂಡಳಿ), ರಾಜ ಶೈಲೇಶ್ ಚಂದ್ರಗುಪ್ತಾ (ಹಿರಿಯ ಪತ್ರಕರ್ತರು), ಅರಕೆರೆ ಜಯರಾಮ್ (ಹಿರಿಯ ಪತ್ರಕರ್ತರು), ಸುಗತಾ ಶ್ರೀನಿವಾಸ್ರಾಜು (ಮುಖ್ಯಸ್ಥರು ದಿ ಸ್ಟೇಟ್ಸ್ಮನ್), ಈಶ್ವರ್ ದೈತೋಟ (ಹಿರಿಯ ಪತ್ರಕರ್ತರು), ಎಚ್.ಆರ್.ರಂಗನಾಥ್ (ಮುಖ್ಯಸ್ಥರು ಪಬ್ಲಿಕ್ ಟಿವಿ), ಆಯೇಷಾ ಖಾನಮ್ (ದಕ್ಷಿಣ ಭಾರತದ ಡಿಡಿ ನ್ಯೂಸ್ ಪ್ರತಿನಿಧಿ), ಕೆ.ವೆಂಕಟೇಶ್ (ಹಿರಿಯ ಛಾಯಾಗ್ರಾಹಕರು), ವಿ.ರಾಮಸ್ವಾಮಿ ಕಣ್ವ (ಹಿರಿಯ ಪತ್ರಕರ್ತರು), ಮಂಜುನಾಥ್ ಅದ್ದೆ (ಹಿರಿಯ ಪತ್ರಕರ್ತರು). ಡಿ.31 ರಂದು ಪ್ರೆಸ್ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್ ತಿಳಿಸಿದ್ದಾರೆ.