ಮದ್ಯ ಮಾರಾಟ : ಅಬಕಾರಿ ಇಲಾಖೆಗೆ ಮುತ್ತಿಗೆ
ಮಳವಳ್ಳಿ, ಅ.20- ಮದ್ಯ ಮಾರಾಟ ನಿಷೇಧ ಎಂದು ಘೋಷಣೆ ಮಾಡಿದ್ದರೂ ಸಹ ಗ್ರಾಮದ ಒಳಗೆ ಕೆಲ ಅಂಗಡಿ, ಹೋಟೆಲ್ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸಿದ ಅಬಕಾರಿ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಜನವಾದಿ ಮಹಿಳಾ ಸಂಘಟನೆ ಹಾಗೂ ಗುಳ್ಳಗಟ್ಟ ಗ್ರಾಮದ ಗ್ರಾಮಸ್ಥರು ಇಲ್ಲಿನ ಅಬಕಾರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಗುಳ್ಳಗಟ್ಟ ಗ್ರಾಮವನ್ನು ಈಗಾಗಲೇ ಮದ್ಯ ಮಾರಾಟ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದೆ, ಆದರೂ ಗ್ರಾಮದ ಕೆಲ ಅಂಗಡಿ ಹೋಟೆಲ್ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು ಈ ಬಗ್ಗೆ ಅಬಕಾರಿ ಇಲಾಖೆಗೆ ಹಲವಾರು ಬಾರಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂಷಿಸಿದರು.
ಈ ಸಂದರ್ಭದಲ್ಲಿ ತಮ್ಮ ಕ್ರಮದ ಸಮರ್ಥನೆಗೆ ಮುಂದಾದ ಅಬಕಾರಿ ಅಧಿಕಾರಿ ವಿಕ್ರಂ ಹಾಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮುಕಿ ಸಹ ನಡೆಯುತು. ನಂತರ ಇನ್ನು 2 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ದೇವಿ, ಸುನೀತ, ಸುಶೀಲ, ಕೃಷ್ಣೇಗೌಡ, ಕೆಂಚೇಗೌಡ, ಬಸವರಾಜು ಮುಂತಾದವರು ಪಾಲ್ಗೊಂಡಿದ್ದರು.
► Follow us on – Facebook / Twitter / Google+