ರೌಡಿ ಸುರೇಶನ ಕೊಲೆ ಪ್ರಕರಣ, ಪಾಲಿಕೆ ಮಾಜಿ ಸದಸ್ಯೆಯ ಮೈದುನ ಸೇರಿ ಐವರು ಸೆರೆ
ಬೆಂಗಳೂರು, ಮೇ 12- ರೌಡಿ ಸುರೇಶನ ಕೊಲೆ ಪ್ರಕರಣದಲ್ಲಿ ಪಾಲಿಕೆ ಮಾಜಿ ಸದಸ್ಯೆಯ ಮೈದುನ ಸೇರಿದಂತೆ ಐವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಜಿ ಕಾರ್ಪೊರೇಟರ್ ರೂಪಾ ರಮೇಶ್ ಅವರ ಮೈದುನ ನಾರಾಯಣ ಅಲಿಯಾಸ್ ನರಿ, ರೌಡಿ ಶೀಟರ್ ಶ್ರೀಧರ್ ಅಲಿಯಾಸ್ ಶ್ರೀ, ರಾಕೇಶ್ಗೌಡ ಸೇರಿದಂತೆ ಐವರು ಬಂಧಿತ ಆರೋಪಿಗಳು. ಮಂಗಳೂರಿನವನಾದ ರಾಕೇಶ್ ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜಯನಗರ 7ನೇ ಬ್ಲಾಕ್ನ ಅಪಾರ್ಟ್ಮೆಂಟ್ನಲ್ಲಿ ಬಾಯಿಗೆ ಪ್ಲಾಸ್ಟರ್ ಹಾಕಿ ಸುರೇಶ್ ಅಲಿಯಾಸ್ ಗೋಲ್ಡನ್ ಸುರೇಶ್ನನ್ನು ಕೊಲೆ ಮಾಡಿದ್ದ ಆರೋಪಿಗಳು ಗೋಣಿಚೀಲದಲ್ಲಿ ಶವ ತುಂಬಿ ಪರಾರಿಯಾಗಿದ್ದರು. ಸುರೇಶ್ಗೆ ಕರೆ ಮಾಡಿದರೂ ಸ್ವೀಕರಿಸದ ಕಾರಣ ಆತನ ಅಕ್ಕ ಮನೆಗೆ ಬಂದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. 2007ರಿಂದ ಕುಂದಾಪುರ ಠಾಣೆ ರೌಡಿಶೀಟರ್ ಆಗಿದ್ದ ಸುರೇಶ್ ಅಲಿಯಾಸ್ ಗೋಲ್ಡನ್ ಸುರೇಶ್ನ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS