ಸಂಸದ ಇ.ಅಹಮದ್ ನಿಧನ : ಬಹು ನಿರೀಕ್ಷಿತ ಬಜೆಟ್ ಮೇಲೆ ಸೂತಕದ ಛಾಯೆ
ನವದೆಹಲಿ. ಫೆ.02 :ನಿನ್ನೆ ಸಂಸತ್ ನಲ್ಲಿ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣದ ವೇಳೆ ಕುಸಿದುಬಿದ್ದಿದ್ದ ಕೇರಳದ ಸಂಸದ ಇ.ಅಹಮದ್ ನಿಧನರಾಗಿದ್ದಾರೆ. ಕೇಂದ್ರ ಬಜೆಟ್ ಗೆ ಕೆಲವೇ ಗಂಟೆಗಳಿಗೂ ಮೊದಲೇ ಸಂಸದರ ನಿಧನದಿಂದ ಬಹು ನಿರೀಕ್ಷಿತ ಬಜೆಟ್ ನಾಳೆಗೆ ಮುಂದೂಡಲಾಗುವುದೇ ಅಥವಾ ಇಂದು ಇಂದೇ ಮಂಡನೆಯಾಗಲಿದೆಯೋ ಎಂಬ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ತಿಳಿದು ಬಂದಿದ್ದಲ್ಲ . ಮೂಲಗಳ ಪ್ರಕಾರ 2 ನಿಮಿಷ ಸಂತಾಪ ಸೂಚಿಸಿ ಬಜೆಟ್ ಮಂಡನೆಗೆ ಅವಕಾಶ ನೀಡಿ ನಾಳೆ ಕಲಾಪಕ್ಕೆ ರಜೆ ನೀಡುವಂತೆ ಬಿಜೆಪಿ ಸಂಸದರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಳು ಸದ್ಯದಲ್ಲೇ ಲಭ್ಯವಾಗಲಿವೆ.
ನಿನ್ನೆ ಸಂಸತ್ತಿನಲ್ಲಿ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾಷಣ ಮಾಡುತ್ತಿದ್ದ ಸಂದರ್ಭ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಇ. ಅಹಮದ್ ಅವರು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಹಮ್ಮದ್ ಸಂಸತ್ತಿನಲ್ಲಿ ಕುಸಿದು ಬಿದ್ದ ವೇಳೆ ಕೂಡಲೇ ಅವರಿಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಅಹಮದ್ ಅವರ ಆರೋಗ್ಯ ವಿಚಾರಿಸಿದ್ದರು. 1991ರಲ್ಲಿ ಮೊದಲ ಬಾರಿ ಚುನಾವಣೆ ಗೆದ್ದಿದ್ದ ಅಹಮದ್ ಅನೇಕ ಬಾರಿ ಸಂಸದರಾಗಿದ್ದರು. ಪ್ರಸ್ತುತ ಕೇರಳದ ಮಲಪ್ಪುರಂ ಲೋಕಸಭಾ ಕ್ಷೇತ್ರವನ್ನು ಅಹಮದ್ ಪ್ರತಿನಿಧಿಸುತ್ತಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS