ಸುಕ್ಮಾ ದಾಳಿ ವೇಳೆ ನಾಯಕತ್ವ ವಹಿಸಿದ್ದ ಸಿಆರ್ಪಿಎಫ್ ಕಮಾಂಡರ್ ವಿಶ್ವನಾಥ್ ಅಮಾನತು
ನವದೆಹಲಿ, ಮೇ 24- ಸುಕ್ಮಾ ದಾಳಿಯಲ್ಲಿ ನಾಯಕತ್ವ ವಹಿಸಿದ್ದ ಸಹಾಯಕ ಕಮಾಂಡೆಂಟ್ ಜಯಾನ್ ವಿಶ್ವನಾಥ್ರನ್ನು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಅಮಾನತು ಮಾಡಿದೆ. ರಸ್ತೆ ಕಾಮಗಾರಿ ನಡೆಸುತ್ತಿದ್ದ ಜನರಿಗೆ ಸಿಆರ್ ಪಿಎಫ್ ಪಡೆ ಭದ್ರತೆ ನೀಡುತ್ತಿತ್ತು. ಈ ವೇಳೆ ಭದ್ರತಾ ಪಡೆಯ ನಾಯಕತ್ವವನ್ನು ಜಯಾನ್ ವಿಶ್ವನಾಥ್ ಅವರು ವಹಿಸಿದ್ದರು. ದಾಳಿ ವೇಳೆ ಸಮರ್ಪಕವಾಗಿ ನಾಯಕತ್ವವನ್ನು ನಿಭಾಯಿಸದ ಕಾರಣ ಇದೀಗ ವಿಶ್ವನಾಥ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, 74ನೇ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಕಮಾಂಡೆಂಟ್ ಫಿರೋಜ್ ಕುಜರ್ ಅವರನ್ನು ಸಹ ಸಶಸ್ತ್ರ ಪಡೆಯಿಂದ ಎತ್ತಂಗಡಿ ಮಾಡಲಾಗಿದೆ. ಸುಕ್ಮಾ ದಾಳಿ ಪ್ರಕರಣ ಸಂಬಂಧ ವಿಶ್ವನಾಥ್ ಅವರ ಮೇಲಿನ ಇಲಾಖಾ ವಿಚಾರಣೆ ಈ ವರೆಗೂ ಪೂರ್ಣಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ವರದಿಯ ಪ್ರಕಾರ ಸುಕ್ಮಾ ಎನ್ಕೌಂಟರ್ ನಡೆದಾಗ ವಿಶ್ವನಾಥ್ ನಾಯಕತ್ವ ವಹಿಸಿದ್ದರು. ಈಗ ಅವರನ್ನು ಅಮಾನತುಗೊಳಿಸಿದ್ದು, ಅವರ ಮೇಲಿನ ವಿಚಾರಣೆ ಇನ್ನೂ ಮುಗಿದಿಲ್ಲವೆಂದು ಮೂಲಗಳು ತಿಳಿಸಿವೆ. ಕಳೆದ ಏಪ್ರಿಲ್ 24 ರಂದು ಛತ್ತೀಸ್ಘಡದ ಸುಕ್ಮಾದಲ್ಲಿ ಸಿಆರ್ಪಿಎಫ್ ಯೋಧರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ದಾಳಿಯಲ್ಲಿ 25 ಯೋಧರು ನಕ್ಸಲರ ಗುಂಡೇಟಿನಿಂದ ಹುತಾತ್ಮರಾಗಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS