ಹುಳಿಯಾರು ಶಾಲೆಯಲ್ಲಿ ವಿಷ ಮಿಶ್ರಿತ ಆಹಾರ ಸೇವಿಸಿ ಮೂರು ಮಕ್ಕಳ ಸಾವು
ಹುಳಿಯಾರು,ಮಾ.9-ರೆಸಿಡೆನ್ಷಿಯಲ್ ಶಾಲೆಯಲ್ಲಿ ವಿಷ ಮಿಶ್ರಿತ ಆಹಾರ ಸೇವನೆಯಿಂದ ಅಮಾಯಕ ಮೂರು ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿರುವ ದಾರುಣ ಘಟನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದಿದೆ. ಹುಳಿಯಾರು ಹೋಬಳಿಯ ವಿದ್ಯಾವಾರಿಧಿ ಇಂಟರ್ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು , ಚಿಕ್ಕನಾಯಕನಹಳ್ಳಿ ತಾಲ್ಲೂಕು ತಿಮ್ಮನಹಳ್ಳಿ ಲಕ್ಷ್ಮಿ ನರಸಿಂಹಯ್ಯ ಅವರ ಪುತ್ರ ಆಕಾಂಕ್ಷ್ಪಲ್ಲಕ್ಕಿ(15) ಹಾಗೂ ಇದೇ ಗ್ರಾಮದ ಯೋಗೇಶ್ ಅವರ ಪುತ್ರ ಶ್ರೇಯಸ್(13) ಮತ್ತು ಹೊಸದುರ್ಗ ತಾಲ್ಲೂಕು ಶ್ರೀರಾಮಪುರದ ಕೊಟ್ರೇಶ್ ಅವರ ಮಗ ಶಾಂತಮೂರ್ತಿ(15) ಮೃತಪಟ್ಟ ದುರ್ದೈವಿ ವಿದ್ಯಾರ್ಥಿಗಳು.
ಪೋಷಕರ ಆಕ್ರಂದನ
ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಸದ್ಯದಲ್ಲೇ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಬೋರ್ಡಿಂಗ್ ಶಾಲೆಯ ವಾಚ್ಮನ್ ಹಾಗೂ ಮೇಲ್ನಹಳ್ಳಿ ಬ್ರಹ್ಮಾನಂದ ಅವರ ಪುತ್ರ ಸುದರ್ಶನ್(15) ಸ್ಥಿತಿ ಚಿಂತಾಜನಕವಾಗಿದ್ದು , ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಬೋರ್ಡಿಂಗ್ ಶಾಲೆಯಲ್ಲಿ ಅನ್ನಸಾರು ಊಟ ಮಾಡಿದ ಕೆಲವೇ ನಿಮಿಷಗಳಲ್ಲಿ ಐವರು ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಉಳಿದವರು ಊಟ ಮಾಡಿಲ್ಲ. ಊಟ ಸೇವಿಸಿದವರು ಅಸ್ವಸ್ಥರಾಗಿದ್ದಾರೆ. ನಾಲ್ವರು ಮಕ್ಕಳು ಹಾಗೂ ಸೆಕ್ಯೂರಿಟಿಗಾರ್ಡ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಮಾರ್ಗಮಧ್ಯೆದಲ್ಲಿಯೇ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾರೋ ಆಹಾರಕ್ಕೆ ವಿಷ ಮಿಶ್ರಣ ಮಾಡಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಅಲ್ಲದೆ ಆಹಾರದಲ್ಲಿ ಬೇರೇನೊ ಮಿಶ್ರಣವಾಗಿ ಈ ದುರ್ಘಟನೆ ಸಂಭವಿಸಿರಬಹುದು ಎನ್ನಲಾಗಿದೆ. ಆಹಾರದ ಸ್ಯಾಂಪಲ್ನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತುಮಕೂರು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಅವರು, ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS