Saturday, April 20, 2024
Homeರಾಜ್ಯಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ದಾಖಲಿಸಿ : ಅಶ್ವಥ್‍ನಾರಾಯಣ

ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ದಾಖಲಿಸಿ : ಅಶ್ವಥ್‍ನಾರಾಯಣ

ಬೆಂಗಳೂರು,ಜ.14-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಸಂಸದ ಅನಂತಕುಮಾರ್ ಹೆಗಡೆ ಟೀಕೆ ಮಾಡಿರುವುದು ಕಾನೂನು ಬಾಹಿರವಾದರೆ ಅದಕ್ಕೂ ಮೊದಲು ಇದೇ ಮಾತುಗಳನ್ನು ಆಡಿರುವ ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ದಾಖಲಿಸಬೇಕಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಡಾ.ಸಿ.ಎನ್.ಅಶ್ವಥ್‍ನಾರಾಯಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅನಂತಕುಮಾರ್ ಹೆಗಡೆ ಹೇಳಿರುವುದನ್ನು ಸರಿ ಎಂದು ಹೇಳುವುದಿಲ್ಲ. ರಾಜಕಾರಣದಲ್ಲಿ ಈ ರೀತಿ ಪದಪ್ರಯೋಗ ಮಾಡುವುದು ಸರ್ವೇ ಸಾಮಾನ್ಯ. ಹೀಗೆ ಮಾತನಾಡಿದ್ದಕ್ಕೆ ದೂರು ದಾಖಲಿಸುವುದಾದರೆ ಕಾಂಗ್ರೆಸ್ ನಾಯಕರ ವಿರುದ್ದವೂ ಬಹಳಷ್ಟು ದೂರುಗಳು ದಾಖಲಾಗಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

ರಾಜಕಾರಣದಲ್ಲಿ ತೊಡೆತಟ್ಟಿದವರನ್ನು ನೋಡಿದ್ದೇವೆ. ಬಹಿರಂಗ ಚರ್ಚೆಗೆ ಪಂತಾಹ್ವಾನ ಕೊಟ್ಟಿರುವುದನ್ನು ನೋಡಿದ್ದೇವೆ .ಸದನದ ಹೊರಗೆ, ಒಳಗೆ ಉಗ್ರವಾಗಿ ಮಾಡಿದವರೂ ಇದ್ದಾರೆ. ಅನಂತಕುಮಾರ್ ಹೆಗೆಡೆ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ. ಪ್ರತಿಯೊಬ್ಬರಿಗೂ ನಾವು ಗೌರವ ಕೊಡಬೇಕು. ಇಂತಹ ತಪ್ಪುಗಳಾದಾಗ ಸರಿಪಡಿಸಬೇಕೆಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ನಾಯಕರಿಗೆ ಏಕವಚನದಲ್ಲಿ ಮಾತನಾಡಿರುವ ನೂರಾರು ನಿದರ್ಶನಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಯಾರ್ಯಾರಿಗೆ ಯಾವ ಭಾಷೆ ಬಳಸಿ ಮಾತನಾಡಿದ್ದಾರೆ ಎಂಬುದು ನಮಗೂ ಗೊತ್ತು. ಕಾಂಗ್ರೆಸ್ ನಾಯಕರು ಏಕವಚನ ಪದ ಪ್ರಯೋಗ ಮಾಡಿರುವುದಕ್ಕೆ ನಾನು ನೂರಾರು ಉದಾರಹಣೆಗಳನ್ನು ಕೊಡಬಲ್ಲೆ. ಅನಂತಕುಮಾರ್ ಹೆಗಡೆ ವಿರುದ್ಧ ದೂರು ದಾಖಲಿಸುವುದಾದರೆ ಮೊದಲು ನಿಮ್ಮ ವಿರುದ್ಧ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಅಗತ್ಯ : ಲೆಟರ್ಮ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ನ್ಯಾಯ್ ಯಾತ್ರೆ ಆರಂಭವಾಗಿದೆ. ಪ್ರತಿಪಕ್ಷಗಳು ತಮ್ಮದೇ ಆದ ಕಾರ್ಯಕ್ರಮ ಹಮ್ಮಿಕೊಂಡಿವೆ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ನಿಮಗೆ ಯಾತ್ರೆಯ ಉದ್ದೇಶವಾದರೂ ಏನು? ಯಾವ ಕಾರಣಕ್ಕಾಗಿ ಇದನ್ನು ನಡೆಸುತ್ತೀದ್ದೀರಿ. ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಯಾತ್ರೆ ನಾಟಕ ಪ್ರಾರಂಭ ಮಾಡಿದೆ ಎಂದು ವ್ಯಂಗ್ಯವಾಡಿದರು.

500 ವರ್ಷಗಳಿಂದ ಉಂಟಾಗಿದ್ದ ಅನ್ಯಾಯವನ್ನು ಪ್ರಧಾನಿ ನರೇಂದ್ರಮೋದಿ ಸರ್ಕಾರ ಸರಿಪಡಿಸುವ ಕೆಲಸ ಮಾಡುತ್ತಿದೆ. ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳು ಭಾಗವಹಿಸಬೇಕಿತ್ತು. ಈ ಕಾರ್ಯಕ್ರಮವನ್ನು ಇಡೀ ದೇಶದ ಜನತೆಯೇ ಎದುರು ನೋಡುತ್ತಿದೆ. ಇದಕ್ಕೆ ಭಾರತಕ್ಕೆ ಗೌರವ ತರುವ ಕೆಲಸ ಎಂದು ಹೇಳಿದರು.

ಇಂಥ ಸಂದರ್ಭದಲ್ಲೇ ಭಾರತ್ ಯಾತ್ರೆ ನಡೆಸುವ ಅಗತ್ಯವಿರಲಿಲ್ಲ. ಜ.22ರ ನಂತರ ನೀವು ಯಾತ್ರೆಯನ್ನು ನಡೆಸಬಹುದಿತ್ತು. ಜನರು ಇದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಎಚ್ಚರಿಸಿದರು.

RELATED ARTICLES

Latest News