ಫೆಬ್ರವರಿಯಲ್ಲಿ ರೈತ ಪರ ಬಜೆಟ್
ಹುಬ್ಬಳ್ಳಿ,ಡಿ.3- ರಾಜ್ಯದಲ್ಲಿ ಸ್ಥಿರ ಸರ್ಕಾರ ಮಾಡಲು ಎಲ್ಲಾ ಯೋಜನೆಗಳನ್ನು ರೂಪಿಸಿದ್ದೇನೆ. ಫೆಬ್ರವರಿಯಲ್ಲಿ ರೈತರ ಪರವಾದ ಹೊಸ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ನವರು ಒಗ್ಗಟ್ಟಾಗಿದ್ದೇವೆ ಎಂದು ಹೇಳುತ್ತಿದ್ದಾರೆ.
ಆದರೆ 15 ಕ್ಷೇತ್ರದಲ್ಲೂ ಅಂತಹ ಯಾವ ವಾತಾವರಣವೂ ಇಲ್ಲ. ಎಲ್ಲೆಡೆ ಬಿಜೆಪಿಗೆ ಜನಬೆಂಬಲವಿದೆ. ಬಿಜೆಪಿ ಪರ ಅಲೆಯಿರುವುದರಿಂದ ಎಲ್ಲಾ 15 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು. ಕಾಂಗ್ರೆಸ್-ಜೆಡಿಎಸ್ನವರಿಗೆ ಕೆ.ಸಿ.ರಾಮಮೂರ್ತಿ ವಿರುದ್ಧ ರಾಜ್ಯಸಭೆಗೆ ಒಬ್ಬ ಅಭ್ಯರ್ಥಿಯನ್ನೂ ನಿಲ್ಲಿಸಲಾಗಲಿಲ್ಲ. ಈ ಮೂಲಕ ಆ ಪಕ್ಷದವರು ಸೋಲೊಪ್ಪಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ ಎಂದರು.
ಉಪಚುನಾವಣೆ ನಂತರ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಕಾಂಗ್ರೆಸ್ನವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಎಸ್ವೈ ಡಿ.9ಕ್ಕೆ ಏನಾಗುತ್ತದೆ ಎಂಬುದನ್ನು ನೀವೇ ನೋಡುತ್ತೀರಿ. ಅಲ್ಲಿಯವರೆಗೂ ಕಾದು ನೋಡಿ. ಕಾಂಗ್ರೆಸ್-ಜೆಡಿಎಸ್ನವರು ತೆಪ್ಪಗಿರಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.