Wednesday, April 24, 2024
Homeರಾಜ್ಯರಾಜಾ ವೆಂಕಟಪ್ಪ ನಾಯಕಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ರಾಜಾ ವೆಂಕಟಪ್ಪ ನಾಯಕಗೆ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಬೆಂಗಳೂರು,ಫೆ.26- ವಿಧಾನಸಭೆ ಸದಸ್ಯರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ಬೆಳಿಗ್ಗೆ ಸದನ ಪ್ರಾರಂಭವಾದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿನ್ನೆ ನಿಧನರಾಗಿರುವುದನ್ನು ಸದನಕ್ಕೆ ತಿಳಿಸಿ ಸಂತಾಪ ನಿರ್ಣಯವನ್ನು ಮಂಡಿಸಿದರು.

ರಾಜಾ ವೆಂಕಟಪ್ಪ ನಾಯಕ ಅವರು 1957 ರ ನವೆಂಬರ್ 23 ರಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಜನಿಸಿದ್ದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಅವರು, 1987 ರಲ್ಲಿ ಪೇಠ ಅಮ್ಮಾಪುರ ಮಂಡಲ ಪಂಚಾಯಿತಿಯ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿ ಅದೇ ಅವಧಿಯಲ್ಲಿ ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದರು. 1994 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಚುನಾಯಿತರಾಗಿದ್ದ ಅವರು, 1999, 2013 ಹಾಗೂ 2023 ರಲ್ಲಿ ಹದಿನಾರನೇ ವಿಧಾನಸಭೆಗೆ ಆಯ್ಕೆಯಾಗಿ ಪ್ರಸ್ತುತ ಸದನದಲ್ಲಿ ಸದಸ್ಯರಾಗಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎಲ್ಲಾ ಸಮುದಾಯದ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಸರಳ ಸಜ್ಜನಿಕೆಯ ನಾಯಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರ ಸಾವು ನಮಗೆಲ್ಲಾ ದೊಡ್ಡ ಮಟ್ಟದ ಸಂದೇಶವನ್ನು ನೀಡುತ್ತದೆ. ನಿನ್ನೆ ಮೊನ್ನೆಯವರೆಗೆ ನಮ್ಮೊಂದಿಗೆ ಇದ್ದವರು ನಿನ್ನೆ ನಿಧನರಾಗಿದ್ದಾರೆ. ದೇವರು ಎಷ್ಟು ವರ್ಷ ಆಯಸ್ಸು ಕೊಡುತ್ತಾನೋ ಅಷ್ಟು ದಿನ ನೆಮ್ಮದಿ ಜೀವನ ನಡೆಸಬೇಕು, ಇನ್ನೊಬ್ಬರ ನೆಮ್ಮದಿಗೂ ಸಹಕರಿಸಬೇಕು. ದ್ವೇಷ, ಕೋಪ, ಸಣ್ಣಪುಟ್ಟ ವಿಚಾರಕ್ಕೆ ತೊಂದರೆ ಕೊಡುವುದರಿಂದ ಮುಂದೆ ಪಶ್ಚಾತ್ತಾಪಪಡಬೇಕಾಗಬಹುದು. ದ್ವೇಷರಹಿತ, ಅಸೂಯೆ ರಹಿತ ಜೀವನ ನಡೆಸುವಂತಾಗಲಿ ಎಂದು ಹೇಳಿ ರಾಜಾ ವೆಂಕಟಪ್ಪ ನಾಯಕ ಅವರ ನಿಧನ ಅತ್ಯಂತ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರಪುರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನೋಡಲು ಹೋಗಿದ್ದೆ. ಆಗ ಅವರು ತುರ್ತು ಚಿಕಿತ್ಸಾ ಘಟಕದಲ್ಲಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನಿಸಿರಲಿಲ್ಲ. ಕಾಂಗ್ರೆಸ್‍ನ ನಿಷ್ಠಾವಂತ ಶಾಸಕ, ನಾಲ್ಕು ಬಾರಿ ಶಾಸಕರಾಗಿದ್ದು, ಅತ್ಯಂತ ಸರಳ, ಸಜ್ಜನಿಕೆಯಿಂದ ಇದ್ದರು. ತಮ್ಮ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿದ್ದರು. ತಮ್ಮ ಅನಾರೋಗ್ಯವನ್ನು ಲೆಕ್ಕಿಸದೆ ಜನಪರ ಕಾರ್ಯ ಮಾಡುತ್ತಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೂ ಆಪ್ತರಾಗಿದ್ದರು. ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ವರ್ಗದವರಿಗೆ ರಾಜಾ ವೆಂಕಟಪ್ಪ ನಾಯಕರವರ ಅಗಲಿಕೆಯ ದುಃಖ ಭರಿಸಲಿ ಎಂದು ಹೇಳಿದರು.

ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಐದು ವರ್ಷ ಈ ಸದನದ ಸದಸ್ಯರಾಗಿರುವಂತೆ ಚುನಾವಣಾ ಆಯೋಗ ಗ್ಯಾರಂಟಿ ಕೊಟ್ಟಿತ್ತು. ಆದರೆ ವಿಧಿ ಅವಕಾಶ ಮಾಡಿಕೊಡಲಿಲ್ಲ. ಸರಳ, ಸಜ್ಜನಿಕೆಯುಳ್ಳವರಾಗಿದ್ದ ಅವರು, ಅವರಾಯಿತು, ಅವರ ಕ್ಷೇತ್ರವಾಯಿತು ಎಂಬಂತಿದ್ದರು. ಅವರ ಮನೆತನ ಸ್ವಾತಂತ್ರ್ಯ ಹೋರಾಟದ ಮನೆತನವಾಗಿತ್ತು ಎಂದು ಸ್ಮರಿಸಿದರು.

ನಿರುದ್ಯೋಗ ತಗ್ಗಿಸಲು ಪ್ರತಿ ವರ್ಷ ಬೃಹತ ಉದ್ಯೋಗ ಮೇಳ : ಸಿಎಂ ಸಿದ್ದರಾಮಯ್ಯ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, 1987 ರಿಂದಲೂ ಅವರು ನನಗೆ ಪರಿಚಯ. ನಾಲ್ಕು ಬಾರಿ ಶಾಸಕರಾಗಿದ್ದರು. ರಾಜ ರಾಜನಾಗಿ, ಬಡವ ಬಡವನಾಗಿ, ಶ್ರೀಮಂತ ಶ್ರೀಮಂತನಾಗಿರಲು ಸಾಧ್ಯವಿಲ್ಲ . ಆದರೆ ಸಂಬಂಧ ಮಾತ್ರ ಶಾಶ್ವತವಾಗಿ ಇರುತ್ತದೆ. ನಾಲ್ಕು ದಿನದ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದೆ. ರಾಜ್ಯಸಭೆ ಚುನಾವಣೆಗೆ ಮತ ಹಾಕುವುದಾಗಿ ಹೇಳಿದ್ದರು. ಯಾರಿಗೂ ತೊಂದರೆ ಕೊಟ್ಟವರಲ್ಲ. ಅವರ ಅಭಿಮಾನಿಯೊಬ್ಬ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಜಾತಶತ್ರು ಎಂದು ಅವರು ಜನಪ್ರಿಯರಾಗಿದ್ದರು ಎಂದು ಅವರ ಒಡನಾಟದ ಘಟನಾವಳಿಗಳನ್ನು ಮೆಲುಕು ಹಾಕಿದರು.
ಸಚಿವರಾದ ಜಮೀರ್ ಅಹಮ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಡಾ.ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ಶಾಸಕರಾದ ಮಾನಪ್ಪ ವಜ್ಜಲ್, ಆರಗ ಜ್ಞಾನೇಂದ್ರ, ಅಜಯ್ ಧರ್ಮಸಿಂಗ್, ನಾಗರಾಜ, ಎನ್.ಟಿ.ಶ್ರೀನಿವಾಸ್ ಅವರು ಮಾತನಾಡಿ ರಾಜಾ ವೆಂಕಟಪ್ಪ ನಾಯಕ ಅವರ ಸೇವೆಯನ್ನು ಸ್ಮರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

ಬಳಿಕ ಸದನದ ಸದಸ್ಯರೆಲ್ಲಾ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು. ಸಭಾಧ್ಯಕ್ಷರು ಮಾತನಾಡಿ, ಸದನದಲ್ಲಿ ಕೈಗೊಂಡ ಸಂತಾಪ ನಿರ್ಣಯದ ಪ್ರತಿಯನ್ನು ಅವರ ಕುಟುಂಬ ವರ್ಗಕ್ಕೆ ಕಳುಹಿಸಿಕೊಡುವುದಾಗಿ ಪ್ರಕಟಿಸಿದರು.

ವಿಧಾನಪರಿಷತ್‍

ಬೆಂಗಳೂರು,ಫೆ.26- ಭಾನುವಾರ ಅಕಾಲಿಕ ನಿಧನರಾದ ಯಾದಗಿರಿ ಜಿಲ್ಲೆ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ವಿಧಾನಪರಿಷತ್‍ನಲ್ಲಿ ಭಾವಪೂರ್ಣ ಸಂತಾಪ ಸೂಚಿಸಲಾಯಿತು. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿದರು.

ಬಳಿಕ ಮಾತನಾಡಿದ ಅವರು, ರಾಜಾ ವೆಂಕಟಪ್ಪ ನಾಯಕ್ ಬಹಳ ಸಂಭಾವಿತ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳ ಬಗ್ಗೆಯೇ ಹೆಚ್ಚೆಚ್ಚು ಕಾಳಜಿ ವಹಿಸಿದ್ದರು. ಸೋತಾಗಲೂ ಜನರ ನಡುವೆಯೇ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ವೇರ್ ಹೌಸಿಂಗ್ ಕಾಪೆರ್ರೇಷನ್ ಅಧ್ಯಕ್ಷರಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎನ್ನುವ ಬೇಸರ ನನಗಿದೆ. ಮೊನ್ನೆ ಸ್ವಲ್ಪ ಗುಣಮುಖರಾಗುತ್ತಿದ್ದರು. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಹೇಳಿದರು.

ಬಳಿಕ ಸಂತಾಪ ನಿರ್ಣಯದ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದರು, ರಾಜಾ ವೆಂಕಟಪ್ಪ ನಾಯಕ್ ಅವರು ಎಂದಿಗೂ, ಯಾರಿಗೂ ನೋಯಿಸದ ನೇರ ನಿಷ್ಠೂರವಾದಿ ರಾಜಕಾರಣಿಯಾಗಿದ್ದರು. ಅವರೊಬ್ಬ ಸ್ನೇಹಜೀವಿಯೂ ಕೂಡ. ಇಂಥವರು ರಾಜಕಾರಣದಲಿ ತುಂಬಾ ಅಪರೂಪ. ಇಷ್ಟು ಬೇಗ ನಮ್ಮನ್ನು ಬಿಟ್ಟು ಅಗಲುತ್ತಾರೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ ಎಂದು ವಿಷಾದಿಸಿದರು.

ಸಭಾನಾಯಕ ಹಾಗೂ ಸಚಿವ ಭೋಸ್‍ರಾಜ್ ಮಾತನಾಡಿ, ನಾಲ್ಕು ಬಾರಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್ ಅವರು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ತಂದೆಯೂ ಕೂಡ ಎರಡು ಬಾರಿ ಕಾಂಗ್ರೆಸ್‍ನಿಂದ ಗೆದ್ದಿದ್ದರು. ಬಡವರು, ಶೋಷಿತರು, ದೀನದಲಿತರು, ಹಿಂದುಳಿದ ವರ್ಗದವರ ಬಗ್ಗೆ ಅಪಾರ ಕಾಳಜಿಯನ್ನು ಇಟ್ಟುಕೊಂಡಿದ್ದರು.

ಕಾಂಗ್ರೆಸ್‍ ಶಾಸಕರಿಗೆ ವ್ಹಿಪ್ ಜಾರಿ

ವಿಶೇಷವಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ತಮ್ಮದೇ ಆದ ಕನಸು ಹೊಂದಿದ್ದರು. ಅವರ ಅಗಲಿಕೆ ತುಂಬಾ ನೋವು ತಂದಿದೆ ಎಂದು ಕಂಬನಿ ಮಿಡಿದರು. ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ರಾಜಾ ವೆಂಕಟಪ್ಪ ನಾಯಕ್ ಅವರನ್ನು ಆ ಭಾಗದಲ್ಲಿ ಬಡವರ ಬಂಧು ಎಂದು ಕರೆಯುತ್ತಿದ್ದರು. ರಾಜಮನೆತನದಿಂದ ಬಂದಿದ್ದರೂ ಎಂದಿಗೂ ಹಮ್ಮು-ಬಿಮ್ಮು ತೋರಿದವರಲ್ಲ.
ಹೇಳಬೇಕಾದುದನ್ನು ನೇರವಾಗೇ ಹೇಳುತ್ತಿದ್ದ ನಿಷ್ಠೂರವಾದಿ. ರಾಜ್ಯವು ಒಬ್ಬ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಿದೆ ಎಂದು ವಿಷಾದಿಸಿದರು.

ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ನಾನು ಕಲಬುರಗಿ ಜಿಲ್ಲೆಯ ಉಸ್ತುವಾರಿಯಾದ ನಂತರ ನನಗೆ ಅವರು ಆತ್ಮೀಯರಾಗಿದ್ದರು. ಕಾಂಗ್ರೆಸ್‍ನಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳಿದರು.

ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ರಾಜಾ ವೆಂಕಟಪ್ಪ ನಾಯಕ್ ನಮ್ಮ ಸಂಬಂಕರೂ ಹೌದು. 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾಗ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದು ಬಿಡುಗಡೆಯಾಗಿ ಬರುತ್ತೇನೆ ಎಂದು ಹೇಳಿದ್ದರು. ಆದರೆ ವಿಯಾಟ ಬೇರೆಯಾಗಿತ್ತು ಎಂದು ವಿಷಾದಿಸಿದರು. ಸದಸ್ಯೆ ತೇಜಸ್ವಿನಿ ರಮೇಶ್ ಕೂಡ ಮಾತನಾಡಿ, ನಾನು ಪತ್ರಕರ್ತೆಯಾಗಿದ್ದಾಗ ಅವರನ್ನು ಸಂದರ್ಶನ ಮಾಡುವ ಅವಕಾಶ ಸಿಕ್ಕಿತ್ತು. ರಾಜಮನೆತನದಿಂದ ಬಂದಿದ್ದರೂ ಸಾಮಾನ್ಯ ಜನರ ಬಗ್ಗೆ ಇದ್ದ ಕಳಕಳಿ ಕಂಡು ನಾನೇ ಆಶ್ಚರ್ಯಚಕಿತಳಾಗಿದ್ದೇನೆ ಎಂದು ಸ್ಮರಿಸಿದರು.

ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ, ರಾಜಾ ವೆಂಕಟಪ್ಪ ನಾಯಕ ಒಬ್ಬ ೀಮಂತ ನಾಯಕ. ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿದ್ದ ಅವರು ನಂಬಿದ ತತ್ವ ಸಿದ್ಧಾಂತದಿಂದ ಎಂದೂ ಹಿಂದೆ ಸರಿದವರಲ್ಲ ಎಂದು ಕಂಬನಿ ಮಿಡಿದರು. ಸಂತಾಪ ಸೂಚಿಸಿದ ಬಳಿಕ ಮೃತರ ಗೌರವಾರ್ಥ ಎಲ್ಲ ಸದಸ್ಯರು ಒಂದು ನಿಮಿಷ ಎದ್ದು ಮೌನಾಚರಣೆ ಸಲ್ಲಿಸಿದರು.

ಸಂತಾಪ ನಿರ್ಣಯದ ಬಳಿಕ ಪ್ರಕಟಣೆ ಓದಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನ ಸಲಹಾ ಸಮಿತಿಯಲ್ಲಿ ತೆಗೆದುಕೊಂಡು ನಿರ್ಣಯದಂತೆ ರಾಜಾ ವೆಂಕಟಪ್ಪ ನಾಯಕ್ ಹಾಲಿ ಸದಸ್ಯರಾಗಿರುವುದರಿಂದ ಅವರಿಗೆ ಗೌರವ ಸೂಚಿಸಿ ಸದನವನ್ನು ಒಂದು ದಿನದ ಮಟ್ಟಿಗೆ ಮುಂದೂಡಬೇಕೆಂದು ತೀರ್ಮಾನಿಸಲಾಗಿದೆ. ಅದರಂತೆ ಬುಧವಾರ ಬೆಳಗ್ಗೆ 9.30ಕ್ಕೆ ಸದನವನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದರು.

RELATED ARTICLES

Latest News