ಕೃಷಿ ಇಲಾಖೆ ರಾಯಭಾರಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು, ಜ. 25- ಲಾಕ್ಡೌನ್ ವೇಳೆ ಕೃಷಿಯತ್ತ ಚಿತ್ತ ಹರಿಸಿದ್ದ ಡಿ ಬಾಸ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ಮೈಸೂರಿನಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ಕೃಷಿಯಲ್ಲೂ ತೊಡಗಿಸಿಕೊಂಡಿದ್ದ ದಚ್ಚು ಇತ್ತೀಚೆಗೆ ಎತ್ತಿನಬಂಡಿ ಓಡಿಸುವ ಮೂಲಕ ಗಮನ ಸೆಳೆದಿದ್ದರಲ್ಲದೆ, ಹಸುವಿನಿಂದ ಹಾಲು ಕರೆಯುವ ದೃಶ್ಯಗಳು ವೈರಲ್ ಆಗಿದ್ದವು.
ಮಂಡ್ಯದ ಬಳಿ ಇರುವ ಗೋಶಾಲೆಯೊಂದಕ್ಕೆ ಮೇವಿನ ಅನುದಾನ ನೀಡಿದ್ದ ದರ್ಶನ್ಗೆ ಪ್ರಾಣಿಗಳು ಎಂದರೆ ಬಲು ಪ್ರೀತಿ. ಅವರ ಫಾರ್ಮ್ಹೌಸ್ನಲ್ಲಿ ಹಸು, ಕುರಿ, ಕೋಳಿ ಸಾಕಣೆ ಅಂದರೆ ಅವರಿಗೆ ಅಚ್ಚುಮೆಚ್ಚು. ವನ್ಯಜೀವಿ ಛಾಯಾಗ್ರಹಣ ಕ್ಲಿಕ್ಕಿಸುವುದೆಂದರೆ ದರ್ಶನ್ಗೆ ಅಚ್ಚುಮೆಚ್ಚು.
ರೈತರು ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ದರ್ಶನ್ ಅವರಿಗೆ ಇರುವ ಅಪಾರ ಪ್ರೇಮವನ್ನು ಪರಿಗಣಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಇತ್ತೀಚೆಗೆ ದರ್ಶನ್ ಅವರ ತೋಟಕ್ಕೆ ಭೇಟಿ ನೀಡಿ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ಮನವಿ ಮಾಡಿದ್ದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮನವಿಗೆ ದರ್ಶನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕೃಷಿ ಇಲಾಖೆಯ ರಾಯಭಾರಿಯಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ದರ್ಶನ್ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ.