2,122 ಕೋಟಿಯಲ್ಲಿ 12,125 ಕಿಮೀ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ:ಡಿಸಿಎಂ ಕಾರಜೋಳ
ಬೆಂಗಳೂರು, ಜೂ. 5-ವಿವಿಧ ಯೋಜನೆಗಳಡಿ ಒಟ್ಟು 12125 ಕಿಮೀಗೆ 2122 ಕೋಟಿಗಳ ರೂ.ವೆಚ್ಚ ಮಾಡಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಮತ್ತು 621 ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಹೆಚ್ಡಿಪಿ, ಅಪೆಂಡಿಕ್ಸ್-ಇ, ಸಿಆರ್ಎಫ್, ನಬಾರ್ಡ್, ಕೆಆರ್ಡಿಸಿಲ್, ಕೆಶಿಪ್ ಕಾಮಗಾರಿಗಳು ಹಾಗೂ 2961 ಕಿಮೀ. ರಾಜ್ಯ ಹೆದ್ದಾರಿ ಮತ್ತು 9164 ಕಿಮೀ. ಜಿಲ್ಲಾ ಮುಖ್ಯ ರಸ್ತೆ ಸೇರಿವೆ ಎಂದರು.
ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ 50 ಅಂತಸ್ತುಗಳ ಅವಳಿ ಗೋಪುರ ಕಛೇರಿ ಕಟ್ಟಡ ನಿರ್ಮಾಣವನ್ನು ನವದೆಹಲಿ ಎನ್ಬಿಸಿಸಿ ಇವರೊಂದಿಗೆ ಪಿಪಿಪಿ ಮಾದರಿ ಅಡಿಯಲ್ಲಿ 1251 ಕೋಟಿ ರೂ.ಮೊತ್ತದಲ್ಲಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ನವದೆಹಲಿಯಲ್ಲಿ ಕರ್ನಾಟಕ ಭವನ-1ರ ನಿರ್ಮಾಣವನ್ನು 120.00 ಕೋಟಿ ರೂ.ಪರಿಷ್ಕೃತ ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ರಸ್ತೆಗಳ ಉನ್ನತೀಕರಣ 15 ವರ್ಷಗಳ ಅವಧಿಯ ನಂತರ ವೈಜ್ಞಾನಿಕವಾಗಿ ರಸ್ತೆಗಳ ಉನ್ನತೀಕರಣ ಮಾಡಲಾಗಿದೆ. 9601 ಕಿಮೀ ರಾಜ್ಯ ಹೆದ್ದಾರಿ ಮತ್ತು 15510 ಕಿಮೀ ಜಿಲ್ಲಾ ಮುಖ್ಯ ರಸ್ತೆಗಳ ಉನ್ನತೀಕರಣಕ್ಕೆ ಸರ್ಕಾರದ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಎಸ್ಹೆಚ್ಡಿಪಿ ಫೇಸ್-4ರಡಿ ಘಟ್ಟ-2ರಡಿ 2720 ಕಿಮೀ ಕೋರ್ರೋಡ್ ರಸ್ತೆಗಳ ಅಭಿವೃದ್ಧಿಪಡಿಸಲು ಅಂದಾಜು 3500 ಕೋಟಿ ರೂ.ಮೊತ್ತಕ್ಕೆ ಯೋಜನೆ ತಯಾರಿಸಲಾಗಿದೆ ಎಂದು ಅವರು ತಿಳಿಸಿದರು.
ಕೆಶಿಪ್ ಅಡಿಯಲ್ಲಿ ಪ್ರಗತಿಯಲ್ಲಿರುವ 418 ಕಿಮೀ ಹೆದ್ದಾರಿ ಅಭಿವೃದ್ಧಿ ಅನುಷ್ಟಾನಗೊಳಿಸಲಾಗುವುದು. ನಗರಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕೆಆರ್ಡಿಸಿಎಲ್ ಮೂಲಕ ಬೆಂಗಳೂರಿನ 12 ಹೈ ಡೆನ್ಸಿಟಿ ಕಾರಿಡಾರ್ ರಸ್ತೆಗಳ 191ಕಿಮೀ ಅಭಿವೃದ್ಧಿಯನ್ನು 788 ರೂ. ಕೋಟಿ ಮೊತ್ತದಲ್ಲಿ ಅನುಷ್ಠಾನಗೊಳಸಲಾಗುವುದು ಎಂದರು.
ಎನ್ಹೆಚ್ಎಐ ಮತ್ತು ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಹಯೋಗದೊಂದಿಗೆ ಬೆಳಗಾವಿ ನಗರದ 69ಕಿಮೀ ಮತ್ತು ರಾಯಚೂರು ನಗರ ರಿಂಗ್ ರಸ್ತೆ ಉದ್ದ 14.50ಕಿಮೀ ನಿರ್ಮಾಣ, ಬೆಂಗಳೂರಿನ ವಸಂತ ನಗರದಲ್ಲಿ ಸುಸಜ್ಜಿತ 77 ವಸತಿ ಗೃಹಗಳ (ಸಮುಚ್ಛಯ) ನಿರ್ಮಾಣವನ್ನು 117 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ ಮಾಡಲಾಗುತ್ತದೆ ಎಂದು ಹೇಳಿದರು.
ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣೆ ಕೇಂದ್ರದ ವತಿಯಿಂದ ವೈಜ್ಞಾನಿಕ ಸಂಚಾರ ನಿರ್ವಹಣೆ ವ್ಯವಸ್ಥೆಯಡಿ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ, ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮತ್ತು ಸೇಪ್ಟಿ ಸಲ್ಯೂಷನ್ ಅನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದಾಗಿ ಅವರು ತಿಳಿಸಿದರು. ಶಿವಮೊಗ್ಗ-ಸವಳಂಗ-ಶಿಕಾರಿಪುರ-ಶಿರಾಳಕೊಪ್ಪ ಮತ್ತು ಹಾಸನ-ರಾಮನಾಥಪುರ-ಪಿರಿಯಾಪಟ್ಟಣ ರಸ್ತೆಗಳಲ್ಲಿ 18 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಮರ್ಪಕ ರಸ್ತೆ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಕಾಲುಸಂಕಗಳನ್ನು ನಿರ್ಮಿಸುವ ಗ್ರಾಮಭಂದು ಸೇತುವೆ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಬೆಂಗಳೂರು ಸುತ್ತಲಿನ ಉಪನಗರ ವರ್ತುಲ ರಸ್ತೆಯ ಡಾಬಸಪೇಟೆ-ದೇವನಹಳ್ಳಿ- ಹೊಸಕೋಟೆ- ತಮಿಳನಾಡು(101ಕಿಮೀ) ಗಡಿ ವರೆಗಿನ ಅಭಿವೃದ್ಧಿಯನ್ನು ಎನ್ಹೆಚ್ಎಐ ವತಿಯಿಂದ ಭಾರತಮಾಲಾ ಪರಿಯೋಜನೆಯಡಿ ಕೈಗೊಳ್ಳಲಾಗಿದೆ.
ಬಾಕಿ ಉಳಿದಿರುವ 143 ಕಿಮೀ ಉದ್ದದ ಎಸ್ಟಿಆರ್ಆರ್ ರಸ್ತೆಯ ಭಾಗವನ್ನು ಹೊಸೂರು ಗಡಿ – ಆನೇಕಲ್ – ಕನಕಪುರ – ರಾಮನಗರ – ಮಾಗಡಿ – ಡಾಬಸಪೇಟೆ ಎನ್ಹೆಚ್ಎಐ ಸಹಯೋಗದಲ್ಲಿ ಕೈಗೊಳ್ಳಲು ಭೂಸ್ವಾಧೀನ ಮೊತ್ತದ 1560 ಕೋಟಿ ರೂ. ಶೇ.30ರಷ್ಟು ರಾಜ್ಯ ಸರ್ಕಾರದಿಂದ ಭರಿಸಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿರುವುದಾಗಿ ಅವರು ಹೇಳಿದರು.
2019-20ರಲ್ಲಿ 9033 ಕೋಟಿರೂ ಅನುದಾನ ಹಾಗೂ 8788 ಕೋಟಿ ರೂ.ಆರ್ಥಿಕ ಪ್ರಗತಿ (ಶೇ.97%) 2020-21ರಲ್ಲಿ 10893 ಕೋಟಿ ರೂ.ಅನುದಾನಕ್ಕೆ 10743 ಕೋಟಿ ರೂ.ಆರ್ಥಿಕ ಪ್ರಗತಿಯಾಗಿದೆ (ಶೇ99%) ಎಂದ ಅವರು, 48 ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ಕಾಮಗಾರಿಗಳು ಹಾಗೂ 15 POCSO ನ್ಯಾಯಾಲಯಗಳ ಕಟ್ಟಡಗಳನ್ನು 255 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗಳಲ್ಲಿ ಗುಣಮಟ್ಟದ 3668 ಕಿಮೀ ಕಾಂಕ್ರೀಟ್ ರಸ್ತೆಗಳನ್ನು 2779 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಎಸ್ಡಿಪಿ ಯೋಜನೆಯಡಿ 609 ಕಿಮೀ ರಸ್ತೆ ಅಭಿವೃದ್ಧಿ ಮತ್ತು ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 933 ಕಿಮೀ ರಸ್ತೆ ಅಭಿವೃದ್ಧಿಯನ್ನು 302 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
2019ರ ಅಗಸ್ಟ್ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ 500.00 ಕೋಟಿ ರೂ.ಮೊತ್ತದಲ್ಲಿ 1850 ಕಾಮಗಾರಿಗಳು ಪೂರ್ಣಗೊಂಡಿವೆ. 2020ರಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳ ದುರಸ್ಥಿಗಾಗಿ 615 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದು, 1553 ಕಾಮಗಾರಿಗಳ ಅನುಷ್ಠಾನ ಕೈಗೊಳ್ಳಲಾಗಿದ್ದು, 384 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ಹೇಳಿದರು.
ಕೆಆರ್ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ 155 ಕಿಮೀ 2095 ಕೋಟಿ ರೂ. ಅಂದಾಜು ಮೊತ್ತದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ ಹಾಗೂ ರಾಜ್ಯವ್ಯಾಪಿ 1395 ಕೋಟಿ ರೂ.ಮೊತ್ತದಲ್ಲಿ 215 ಸೇತುವೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, 123 ಸೇತುವೆಗಳು ಪೂರ್ಣಗೊಳಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಸಹಯೋಗದಲ್ಲಿ 4762 ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನಗೊಳಿಸಲಾಗುತ್ತಿದೆ.
ಕಳೆದ 2 ವರ್ಷಗಳಲ್ಲಿ 399 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯನ್ನು 2484 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಸಿಗಂಧೂರು ಸೇತುವೆ ರೂ.482.84 ಕೋಟಿ ರೂಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಎನ್ಹೆಚ್ಎಐ ವತಿಯಿಂದ ಬೆಂಗಳೂರು-ಮೈಸೂರು, ತುಮಕೂರು-ಶಿವಮೊಗ್ಗ ಮತ್ತು ಬಳ್ಳಾರಿ-ಹಿರಿಯೂರು 4 ಫಥದ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬೆಂಗಳೂರು-ಚೆನ್ಯೆ ಎಕ್ಸ್ಪ್ರೆಸ್ ವೇ ಹೆದ್ದಾರಿ ಕಾಮಗಾರಿಯನ್ನು ಸಹ ಪ್ರಾರಂಭಿಸಲಾಗಿದೆ. ಎನ್ಹೆಚ್ಎಐ ವತಿಯಿಂದ 1980ಕಿಮೀ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು 35280 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.