ದೆಹಲಿಯಲ್ಲಿ ರೈತರ ಬೃಹತ್ ರ್ಯಾಲಿ
ನವದೆಹಲಿ, ಸೆ.21- ರಾಷ್ಟ್ರರಾಜಧಾನಿ ದೆಹಲಿ ರೈತರ ಮತ್ತೊಂದು ಮೆಗಾ ರ್ಯಾಲಿಗೆ ಸಾಕ್ಷಿಯಾಯಿತು. 15 ಸಾವಿರಕ್ಕೂ ಅಧಿಕ ಕೃಷಿಕರು ಈ ಮೆಗಾ ರ್ಯಾಲಿಯಲ್ಲಿ ಭಾಗವಹಿಸಿ ತಮ್ಮ ಹಿತಾಸಕ್ತಿಯನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು.
ವಿವಿಧ ಬೇಡಿಕಗೆಳ ಈಡೇರಿಕೆಗೆ ಆಗ್ರಹಿಸಿ ರೈತರು ಬೃಹತ್ ರ್ಯಾಲಿ ನಡೆಸಿದ ಪರಿಣಾಮ ರಾಜಧಾನಿಯ ಬಹುತೇಕ ಕಡೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಯಿತು.
ಸೆಪ್ಟೆಂಬರ್ 17ರಂದು ಉತ್ತರ ಪ್ರದೇಶದ ಸಹರಣ ಪುರದಲ್ಲಿ ರೈತರ ಮೆಗಾ ರ್ಯಾಲಿ ಆರಂಭವಾಗಿದ್ದು, ಇಂದು ದೆಹಲಿಗೆ ಪ್ರವೇಶಸಿದರು. ಭಾರತ್ ಕಿಸಾನ್ ಯೂನಿಯನ್ ಒಕ್ಕೂಟದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಪ್ರಮುಖವಾಗಿ ಕಬ್ಬು ಬೆಳಗಾರರ ಬಾಕಿ ಪಾವತಿ, ಬೇಷರತ್ ಸಾಲಮನ್ನಾ, ಉತ್ತರ ಪ್ರದೇಶದ ಗಂಗಾ ತಟದ ಸ್ವಚ್ಛತೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ರೈತರ ಬೃಹತ್ ಪ್ರತಿಭಟನೆ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.