Thursday, March 28, 2024
Homeಬೆಂಗಳೂರುಬೆಂಗಳೂರು ಮತ್ತೊಂದು ಅಗ್ನಿ ಅವಘಡ, ಹೊತ್ತಿ ಉರಿದ ಬಸ್‍ಗಳು

ಬೆಂಗಳೂರು ಮತ್ತೊಂದು ಅಗ್ನಿ ಅವಘಡ, ಹೊತ್ತಿ ಉರಿದ ಬಸ್‍ಗಳು

ಬೆಂಗಳೂರು, ಅ.30- ನಗರದಲ್ಲಿ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದ್ದು, ಗ್ಯಾರೇಜ್ ಬಳಿ ನಿಲ್ಲಿಸಿದಂತಹ 10ಕ್ಕೂ ಹೆಚ್ಚು ಖಾಸಗಿ ಬಸ್‍ಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೆರೆ ಹಳ್ಳಿಯ ವೀರಭದ್ರ ನಗರದಲ್ಲಿನ ಪಿಇಎಸ್ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಗ್ಯಾರೇಜ್ ಮುಂಭಾಗದ ಆವರಣದಲ್ಲಿ ರಿಪೇರಿ ಬಸ್‍ಗಳು, ಬೇರೆ ಬೇರೆ ಸಂಸ್ಥೆಗಳಿಗೆ ಸೇರಿದ ಬಸ್‍ಗಳು, ಕಂಪನಿ ಬಸ್‍ಗಳು ಹಾಗೂ ವಾಹನಗಳನ್ನು ನಿಲ್ಲಿಸಲಾಗಿತ್ತು.

ಇಂದು ಬೆಳಿಗ್ಗೆ 11 ಗಂಟೆ ಸುಮಾರಿನಲ್ಲಿ ಒಂದು ಬಸ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಮುಗಿಲೆತ್ತರಕ್ಕೆ ಹೊಗೆ ಆವರಿಸಿಕೊಂಡಿದ್ದು, ಅಕ್ಕಪಕ್ಕವಿದ್ದ ಬಸ್‍ಗಳು, ವಾಹನಗಳಿಗೂ ಬೆಂಕಿ ತಾಗಿದ್ದರಿಂದ ಹೊತ್ತಿ ಉರಿದಿವೆ. ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ 15 ವಾಹನಗಳೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಬೆಂಕಿ ತಹಬದಿಗೆ ತರಲು ಹರಸಾಹಸ ಪಟ್ಟರು.

ಹೈಕಮಾಂಡ್‍ ಷರತ್ತಿಗೆ ಶಾಕ್ ಅದ ನಿಗಮ ಮಂಡಳಿ ಆಕಾಂಕ್ಷಿಗಳು

ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಹೊತ್ತಿ ಉರಿದಿದ್ದರಿಂದ ಗ್ಯಾರೇಜ್ ಪಕ್ಕದಲ್ಲೇ ಇದ್ದಂತಹ ಶೆಡ್‍ಗಳಲ್ಲಿನ ನಿವಾಸಿಗಳು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿ ಅವಘಡದಿಂದಾಗಿ ಸುತ್ತಮುತ್ತಲಿನ ನಿವಾಸಿಗಳು ಕೆಲಕಾಲ ಆತಂಕಗೊಂಡರು.

ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಒಂದು ಬಸ್‍ನಿಂದ ಹಲವು ಬಸ್‍ಗಳಿಗೆ ತಾಗಿ ಬೆಂಕಿ ಆವರಿಸಿಕೊಂಡಿದ್ದರಿಂದ 10ಕ್ಕೂ ಹೆಚ್ಚು ಬಸ್‍ಗಳು ಸುಟ್ಟು ಹೋಗಿದೆ. ಅಕ್ಕಪಕ್ಕದ ಕಟ್ಟಡಗಳಿಗೂ ಅಲ್ಪಪ್ರಮಾಣದ ಹಾನಿಯಾಗಿದ್ದು, ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ್ ಅವರು ಆಗಮಿಸಿ ಮಾಹಿತಿ ಪಡೆದುಕೊಂಡರು. ಗಿರಿನಗರ ಠಾಣೆ ಪೊಲೀಸರು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು, ಬಸ್‍ನಲ್ಲಿ ಡೀಸೆಲ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆಯೇ, ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

RELATED ARTICLES

Latest News