ಗೋವಿಂದರಾಜುಗೆ ಒಲಿದ ಜೆಡಿಎಸ್ನ ಪರಿಷತ್ ಟಿಕೆಟ್
ಕೋಲಾರ, ಜೂ.18- ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕೋಲಾರದ ಗೋವಿಂದರಾಜು ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ನಿವಾಸದಲ್ಲಿ ಬಿ ಫಾರಂ ನೀಡಿ ಶುಭ ಕೋರಿದರು. ಗೋವಿಂದರಾಜು ಅವರು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಶ್ರಮಿಸುತ್ತಿದ್ದು, ಅವರ ದುಡಿಮೆಗೆ ಸಿಕ್ಕ ಪ್ರತಿಫಲ ಇದಾಗಿದೆ.
ಇಂದು ಬೆಳಗ್ಗೆ ನಗರದ ಸಾಯಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಬೀಳ್ಕೊಟ್ಟರು. ದೇವೇಗೌಡರ ನಿವಾಸಕ್ಕೆ ತೆರಳಿದ ಗೋವಿಂದರಾಜು ಅವರು ಅವರ ಆಶೀರ್ವಾದ ಪಡೆದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷದ ಬಲ ಹೆಚ್ಚಿಸುವ ಹೊಣೆಯನ್ನು ನಿಮಗೆ ಹೊರಿಸಿದ್ದೇನೆ ಎಂದು ಈ ಸಂದರ್ಭದಲ್ಲಿ ದೇವೇಗೌಡರು ತಿಳಿಸಿದರು.
ಗೋವಿಂದರಾಜು ಅವರು ಪತ್ರಿಕೆಯೊಂದಿಗೆ ಮಾತನಾಡಿ, ದೇವೇಗೌಡರು ಹೊರಿಸಿರುವ ಜವಾಬ್ದಾರಿಯನ್ನು ಶಿರಸಾವಹಿಸಿ ಮಾಡುತ್ತೇನೆ. ಅವರು ಹೇಳಿರುವ ಮಾತುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಚೌಡಾರೆಡ್ಡಿ, ಮುಖಂಡ ಸಿಎಂಆರ್ ಶ್ರೀನಾಥ್, ವಕ್ಕಲೇರಿ ರಾಮು, ಜಿಪಂ ಸದಸ್ಯ ಚಿಕ್ಕಂಡೂರು ನಂಜುಂಡಪ್ಪ ಹಾಜರಿದ್ದರು.