Tuesday, April 23, 2024
Homeರಾಜ್ಯಸಿದ್ದು-ಡಿಕೆಶಿ ನಡುವೆ ಅನ್ಯೋನ್ಯತೆ

ಸಿದ್ದು-ಡಿಕೆಶಿ ನಡುವೆ ಅನ್ಯೋನ್ಯತೆ

ಬೆಂಗಳೂರು, ಅ.31- ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಂಥಾ ಜನಪರ-ಜನಪ್ರಿಯ ಪ್ರಧಾನಮಂತ್ರಿ ಮತ್ತೆ ಯಾರೂ ಬಂದಿಲ್ಲ, ಬಡವರಿಗೆ ಬದುಕು ಕಲ್ಪಿಸಿಕೊಟ್ಟ ದಿಟ್ಟ ಧೈರ್ಯವಂತ ಮಹಿಳೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದರು. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 39 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿರಾಗಾಂಧಿ ಅವರಂಥಾ ಜನಪರ-ಜನಪ್ರಿಯ ಪ್ರಧಾನಮಂತ್ರಿ ಮತ್ತೆ ಯಾರೂ ಬಂದಿಲ್ಲ. ಇಂರಾಗಾಂಧಿ ಅತ್ಯಂತ ಧೈರ್ಯವಂತ ಮಹಿಳೆ. ದೇಶದ ಬಡವರ ಆರಾಧ್ಯ ದೈವ ಆಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾತ್ಮಗಾಂಧಿ ಹತ್ಯೆ, ಇಂದಿರಾಗಾಂಧಿ ಹತ್ಯೆ, ರಾಜೀವ್ ಗಾಂಧಿ ಹತ್ಯೆ ದೇಶಕ್ಕೆ ಆದ ದೊಡ್ಡ ನಷ್ಟ. ಈ ಮೂವರು ದೇಶಕ್ಕಾಗಿ ಹುತಾತ್ಮರಾದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಇವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ ನಮ್ಮ ದೇಶದ ಮಣ್ಣಿನಲ್ಲಿ ದಾಖಲಾಗಿದೆ ಎಂದರು.

ಬಿಜೆಪಿಯವರಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಚರಿತ್ರೆ ಇಲ್ಲ. ಕೇವಲ ಖಾಲಿ ದೇಶಭಕ್ತಿ ಬಗ್ಗೆ ಭಾಷಣ ಮಾಡುತ್ತಾರೆ. ಖಾಲಿ ಭಾಷಣಗಳಿಂದ ದೇಶಕ್ಕೆ, ದೇಶದ ಜನರಿಗೆ ಏನೂ ಸಿಗುವುದಿಲ್ಲ ಎಂದು ಟೀಕಿಸಿದರು.
1978 ರಲ್ಲಿ ನಾನು ಜನತಾಪಾರ್ಟಿಯಲ್ಲಿ ಇದ್ದೆ. ಹಾರೋಹಳ್ಳಿಗೆ ನಾನು ಓಟು ಕೇಳಲು ಹೋಗಿದ್ದೆ. ಮನೆ ಮನೆಗೆ ಹೋಗಿ ಅಲ್ಲಿ ವಿಚಾರಿಸುತ್ತಿದ್ದೆ. ಎಲ್ಲರ ಮನೆಗಳಲ್ಲಿ ಇಂದಿರಾ ಫೋಟೋ ಇರುತ್ತಿತ್ತು. ಜನ ನಾವು ಇಂದಿರಾಗಾಂಧಿಗೆ ಓಟು ಹಾಕೋದು ಎನ್ನುತ್ತಿದ್ದರು ಎಂದರು.

ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಕೊಡುಗೆ ಅಪಾರ ಎಂದು ಪಟೇಲರ ಹೋರಾಟದ ಘಟನೆಗಳನ್ನು ಮುಖ್ಯಮಂತ್ರಿ ಸ್ಮರಿಸಿಕೊಂಡರು.

ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು

ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಭಾವಚಿತ್ರ ಕಂಡು ಬರಲಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್, ಚಂದ್ರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರು ವೇದಿಕೆಯಲ್ಲಿದ್ದರು.

ಸಿದ್ದು-ಡಿಕೆಶಿ ನಡುವೆ ಅನ್ಯೋನ್ಯತೆ:
ಮಂಡ್ಯದಲ್ಲಿನ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಬೇಕಾಗಿದ್ದ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಆರಂಭದಲ್ಲೇ ಮಾತನಾಡಿ ನಿರ್ಗಮಿಸಿದರು. ಆರಂಭದಲ್ಲಿ ಪುಷ್ಪಾರ್ಚನೆ ಮಾಡುವಾಗ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಟ್ಟಾಗಿ ಕಾಣಿಸಿಕೊಂಡರು. ನಂತರ ವೇದಿಕೆಯಲ್ಲೂ ಇಬ್ಬರು ಪರಸ್ಪರ ಪಿಸುಮಾತಿನಲ್ಲಿ ಚರ್ಚೆ ಮಾಡುತ್ತಿದ್ದದ್ದು ಕಂಡು ಬಂತು. ತಮ್ಮ ಭಾಷಣ ಮುಗಿಸಿ ಸಿದ್ದರಾಮಯ್ಯ ಅವರು ಹೊರಡಲು ಅನುವಾದಾಗ ಡಿ.ಕೆ.ಶಿವಕುಮಾರ್ ಆತ್ಮೀಯವಾಗಿ ಕೈ ಕುಲುಕಿ, ಹೊರಡುತ್ತಿದ್ದ ಸಿದ್ದರಾಮಯ್ಯ ಮತ್ತೆ ಕೆಲ ಕಾಲ ಕಾರ್ಯಕ್ರಮದಲ್ಲಿ ಕುಳಿತುಕೊಂಡರು. ವೇದಿಕೆಯಲ್ಲಿ ಮುಖ್ಯಮಂತ್ರಿಯವರ ಕಿವಿಯಲ್ಲಿ ಡಿ.ಕೆ.ಶಿವಕುಮಾರ್ ಏನನ್ನೋ ಪಿಸುಗುಟ್ಟಿದರು. ಅದಕ್ಕೆ ಸಿದ್ದರಾಮಯ್ಯ ಅವರು ಅಷ್ಟೇ ಪ್ರೀತಿಯಿಂದ ಸ್ಪಂದಿಸಿದ್ದು ಕಂಡು ಬಂತು.

ಗೃಹ ಸಚಿವ ಪರಮೇಶ್ವರ್ ಅವರ ಮನೆಯಲ್ಲಿ ನಡೆದ ಬೋಜನಕೂಟದಲ್ಲಿ ಮುಖ್ಯಮಂತ್ರಿಯವರು ಭಾಗವಹಿಸಿದ್ದರು. ಅದಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ಇರಲಿಲ್ಲ ಎಂಬುದು ಚರ್ಚೆಗಳನ್ನು ಹುಟ್ಟು ಹಾಕಿತ್ತು. ಇತ್ತೀಚೆಗೆ ಅಕಾರ ಹಂಚಿಕೆ ವಿಷಯವಾಗಿ ಕೆಲ ಶಾಸಕರು ಹಾಗೂ ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಅಸಮಧಾನ ಹೊಗೆಯಾಡುತ್ತಿದೆ ಎಂಬ ವದ್ಧಂತಿಗಳಿಗೆ ವೇದಿಕೆಯಲ್ಲಿ ಇಬ್ಬರ ಅನ್ಯೋನ್ಯ ನಡವಳಿಕೆಗಳು ಅಪವಾದವಾಗಿದ್ದವು.

RELATED ARTICLES

Latest News