Wednesday, April 24, 2024
Homeರಾಜ್ಯಕೋಟಿ ಹಣಕ್ಕೆ ಅಪಹರಣ ನಾಟಕ : ಕಾರು ಚಾಲಕ, ರೌಡಿಗಳು ಸೇರಿ ಐವರ ಸೆರೆ

ಕೋಟಿ ಹಣಕ್ಕೆ ಅಪಹರಣ ನಾಟಕ : ಕಾರು ಚಾಲಕ, ರೌಡಿಗಳು ಸೇರಿ ಐವರ ಸೆರೆ

ಬೆಂಗಳೂರು,ಫೆ.16- ಕೆಲಸ ನೀಡಿದ್ದ ಮಹಿಳಾ ಉದ್ಯಮಿಯಿಂದಲೇ ಹಣ ದೋಚಲು ಅಪಹರಣ ನಾಟಕವಾಡಿದ್ದ ಕಾರು ಚಾಲಕ ಹಾಗೂ ಇಬ್ಬರು ರೌಡಿಗಳು ಸೇರಿ 5 ಮಂದಿಯನ್ನು 24 ಗಂಟೆಯೊಳಗೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಹೇಮಂತ್ ಕುಮಾರ್ (34), ಶ್ರೀನಿವಾಸ (40), ಮೋಹನ್ (39), ತೇಜಸ್ (25) ಹಾಗೂ ಕುಲದೀಪು (22) ಬಂಧಿತರು. ಬಂಧಿತರ ಪೈಕಿ ಶ್ರೀನಿವಾಸ್ ಮತ್ತು ಮೋಹನ್ ಹೆಸರು ಮಲ್ಲೇಶ್ವರಂ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದೆ.

ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೈಕೋಲೇಔಟ್, 1ನೇ ಕ್ರಾಸ್ ನಿವಾಸಿ ಮಹಿಳಾ ಉದ್ಯಮಿ ಲಕ್ಷ್ಮೀ ಎಂಬುವವರು ಸೀರಿಯಲ್ ಪ್ರೊಡಕ್ಷನ್ ಹೌಸ್ ವ್ಯವಹಾರ ಮಾಡಿಕೊಂಡಿರುತ್ತಾರೆ. ಈ ವ್ಯವಹಾರಕ್ಕೆ ತಮಗೆ ಪರಿಚಯವಿರುವ ಹೇಮಂತ್ ಕುಮಾರ್ ಅವರನ್ನು ಕಾರು ಚಾಲಕನಾಗಿ ತಮ್ಮ ಬಳಿ ನೇಮಕ ಮಾಡಿಕೊಂಡಿದ್ದರು.

ಈ ಮಹಿಳಾ ಉದ್ಯಮಿ ಮನೆಕಟ್ಟಲು ಒಂದು ಕೋಟಿ ಸಾಲ ಬ್ಯಾಂಕ್‍ನಿಂದ ಮಂಜೂರು ಆಗಿತ್ತು. ಈ ವಿಚಾರ ಅವರ ಕಾರು ಚಾಲಕ ಹೇಮಂತ್ ಹಾಗೂ ಮತ್ತೊಬ್ಬನಿಗೆ ಗೊತ್ತಾಗಿದೆ. ಈ ಇಬ್ಬರು ಸಹಾಯಕರು ಫೆ.12ರಂದು ಬೆಳಿಗ್ಗೆ 8.30ರ ಸಮಯದಲ್ಲಿ ಮೈಸೂರಿಗೆ ಕಾರ್ಯನಿಮಿತ್ತ ಹೋಗುವುದಾಗಿ ಮನೆಯಿಂದ ಅವರ ಕಾರನ್ನು ತೆಗೆದುಕೊಂಡು ಹೋಗಿದ್ದು, ಅದೇ ದಿನ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಕಾರು ಚಾಲಕ ತನ್ನ ಮೊಬೈಲ್‍ನಿಂದ ಲಕ್ಷ್ಮೀ ಅವರ ಮೊಬೈಲ್ ಗೆ ಕರೆ ಮಾಡಿ ಮಾತನಾಡಿದ್ದಾನೆ.

ಒಲಂಪಿಕ್‍ನಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ

ಫೆ.13ರಂದು ಈ ಮಹಿಳಾ ಉದ್ಯಮಿ ಇಬ್ಬರು ಸಹಾಯಕರಿಗೆ ಕರೆ ಮಾಡಿದ್ದಾಗ ಅವರ ಮೊಬೈಲ್ ಸ್ವಿಚ್‍ಆಪ್ ಆಗಿರುವುದು ಕಂಡು ಬಂದಿದೆ. ಫೆ.14ರಂದು ಮಧ್ಯಾಹ್ನ ಸುಮಾರು 1.50ರ ಸಮಯದಲ್ಲಿ ಕಾರು ಚಾಲಕ ಅವರಿಗೆ ವಾಟ್ಸಾಪ್ ಕರೆ ಮಾಡಿ ಅಳುತ್ತಾ ನಮ್ಮಿಬ್ಬರನ್ನು ಯಾರೋ ಕಿಡ್ನ್ಯಾಪ್ ಮಾಡಿ ಕಾರಿನಲ್ಲಿ ಸುತ್ತಾಡಿಸುತ್ತಿದ್ದಾರೆಂದು ತಿಳಿಸಿರುತ್ತಾರೆ. ನಂತರ ಅಪರಿಚಿತ ವ್ಯಕ್ತಿಯೊಬ್ಬ ಲಕ್ಷ್ಮೀಯವರಿಗೆ ಕರೆಮಾಡಿ, ನಿಮ್ಮ ಹುಡುಗರು ಬೇಕೆಂದರೆ 1 ಕೋಟಿ ಹಣವನ್ನು ಸಂಜೆಯೊಳಗೆ ನೀಡಬೇಕು, ಇಲ್ಲವಾದರೆ ಅವರಿಬ್ಬರನ್ನು ಮುಗಿಸುತ್ತೇವೆಂದು ತಿಳಿಸಿ ಕರೆ ಸ್ಥಗಿತಗೊಳಿಸಿದ್ದಾರೆ.

ಇದರಿಂದ ಗಾಬರಿಯಾದ ಲಕ್ಷ್ಮೀ ಅವರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ಹೋಗಿ ತಮ್ಮ ಬಳಿ ಸಹಾಯಕರಾಗಿದ್ದ ಇಬ್ಬರು ಯುವಕರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದರು. ಪೊಲೀಸರು ಹಣಕ್ಕಾಗಿ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಇನ್ಸ್‍ಪೆಕ್ಟರ್ ಅವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿದ್ದರು.

ಈ ತಂಡವು ತಾಂತ್ರಿಕ ಮತ್ತು ಟೋಲ್‍ಗಳಲ್ಲಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇದರ ಆಧಾರದ ಮೇರೆಗೆ ತನಿಖೆ ಕೈಗೊಂಡು ಪ್ರಕರಣ ದಾಖಲಾದ 24 ಗಂಟೆಯೊಳಗೆ ದೊಡ್ಡಬಳ್ಳಾಪುರ ಸಮೀಪದ ಚಿಕ್ಕ ಮಧುರೆ ಪಾರಂ ಹೌಸ್‍ನಲ್ಲಿಟ್ಟಿದ್ದ ಇಬ್ಬರನ್ನು ರಕ್ಷಿಸಿ ಕರೆ ತಂದು ತೀವ್ರ ವಿಚಾರಣೆಗೊಳಪಡಿಸಿದಾಗ, ಚಾಲಕನೇ ತನ್ನ ಸ್ನೇಹಿತ ಹಾಗೂ ಇನ್ನಿತರರೊಂದಿಗೆ ಸೇರಿಕೊಂಡು 1 ಕೋಟಿ ಆಸೆಗೆ ಬಿದ್ದು ಅಪಹರಣದ ನಾಟಕವಾಡಿರುವುದು ಬೆಳಕಿಗೆ ಬಂದಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚ್ಯುಟಿ ಸವಲತ್ತು

ಈ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಲಕ್ಷ್ಮೀ ಬಳಿ ಸಹಾಯಕರಾಗಿ ಕೆಲಸಕ್ಕಿದ್ದ ಕೆಲವು ವ್ಯಕ್ತಿಗಳು ಪೂರ್ವ ನಿಯೋಜಿತ ಯೋಜನೆಯನ್ನು ಮಾಡಿಕೊಂಡು, ಅಪಹರಣ ಎಸಗಿದ ಇಬ್ಬರು ರೌಡಿಗಳು ಹಾಗೂ ಇನ್ನಿತರರೊಂದಿಗೆ ಸೇರಿಕೊಂಡು ಈ ಕೃತ್ಯ ಮಾಡಿರುವುದು
ತನಿಖೆಯಿಂದ ಧೃಡಪಟ್ಟಿದ್ದು ತನಿಖೆ ಮುಂದುವರೆದಿದೆ.

ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲ್ಲು ಅಡಾವತ್ ಮಾರ್ಗದರ್ಶನದಲ್ಲಿ, ಎಸಿಪಿ ಕೃಷ್ಣಮೂರ್ತಿ, ಇನ್ಸ್ ಪೆಕ್ಟರ್ ಮಂಜು ಅವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

RELATED ARTICLES

Latest News