Thursday, April 25, 2024
Homeರಾಜ್ಯದಿಕ್ಕುದೆಸೆಯಿಲ್ಲದ ಇಂಡಿ ಮೈತ್ರಿಕೂಟ ನಾವಿಕನಿಲ್ಲದ ಹಡಗಿನಂತಾಗಿದೆ : ಆರ್.ಅಶೋಕ್

ದಿಕ್ಕುದೆಸೆಯಿಲ್ಲದ ಇಂಡಿ ಮೈತ್ರಿಕೂಟ ನಾವಿಕನಿಲ್ಲದ ಹಡಗಿನಂತಾಗಿದೆ : ಆರ್.ಅಶೋಕ್

ಬೆಂಗಳೂರು,ಮಾ.23- ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟಕ್ಕೆ ಪ್ರಧಾನಿ ನರೇಂದ್ರಮೋದಿ ಕಾಪ್ಟನ್ ಆದರೆ ಇಂಡಿ ಮೈತ್ರಿಕೂಟ ನಾವಿಕನಿಲ್ಲದ ಹಡಗಿನಂತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನರೇಂದ್ರಮೋದಿ ಅವರೇ ಕ್ಯಾಪ್ಟನ್. ಬಿಜೆಪಿ ಅಧಿಕಾರಕ್ಕೆ ಬಂದು ಪುನಃ ಅವರೇ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ. ಇಂಡಿ ಮೈತ್ರಿಕೂಟಕ್ಕೆ ನಾಯಕನೂ ಇಲ್ಲ, ಯಾರೂ ಇಲ್ಲ ಎಂದು ಕುಹುಕವಾಡಿದರು.

ವಿಪಕ್ಷಗಳ ಇಂಡಿ ಒಕ್ಕೂಟದ ಜೊತೆಗೆ ಶಸ್ತ್ರಸಜ್ಜಿತರಾಗಿದ್ದ ನಿತೀಶ್ ಕುಮಾರ್ ಅಲ್ಲಿ ಶಸ್ತ್ರತ್ಯಾಗ ಮಾಡಿ ನಮ್ಮ ಜೊತೆ ಬಂದಿದ್ದಾರೆ. ಇಂಡಿ ಒಕ್ಕೂಟವು ನಾಯಕತ್ವ ಇಲ್ಲದೆ, ದಿಕ್ಕುಗಾಣದಂತಿದೆ. ಮ್ಯಾಚ್, ಮ್ಯಾಚಿನ ದಿನಾಂಕ ಫಿಕ್ಸ್ ಆಗಿದೆ. ಆಟಗಾರರೂ ಫಿಕ್ಸ್ ಆಗಿದ್ದಾರೆ. ಸಾರ್ವಜನಿಕರೂ ಫಿಕ್ಸ್ ಆಗಿದ್ದಾರೆ. ನಮ್ಮ ಕ್ಯಾಪ್ಟನ್ ನರೇಂದ್ರ ಮೋದಿಯವರು ಎಂದು ನಿಗದಿಯಾಗಿದೆ. ಅವರ ಕ್ಯಾಪ್ಟನ್ ಇನ್ನೂ ಫಿಕ್ಸ್ ಆಗಿಲ್ಲ ಎಂದು ಟೀಕಿಸಿದರು.

ಚುನಾವಣೆ ಬಂದಾಗ ಪ್ರಚಾರ ಬೇಕೇ ಬೇಕು. ಅದೇರೀತಿ ಸುಳ್ಳು ಸುದ್ದಿಗಳು ಬಂದಾಗ ಅದಕ್ಕೆ ಸ್ಪಷ್ಟನೆ ನೀಡುವುದು ಪಕ್ಷದ ಕರ್ತವ್ಯ. ಇವೆರಡನ್ನು ಒಂದೇ ಜಾಗದಲ್ಲಿ ಮಾಡಲಾಗುವುದು ಎಂದರು. ಬಿಜೆಪಿ ನಿರಂತರವಾಗಿ ಮಾಧ್ಯಮ ಸ್ನೇಹಿಯಾಗಿ ಕೆಲಸ ಮಾಡಿದೆ. ಪ್ರತಿ ಚುನಾವಣಾ ಸಂದರ್ಭದಲ್ಲೂ ಮಾಧ್ಯಮ ಕೇಂದ್ರವನ್ನು ತೆರೆಯಲಾಗುತ್ತಿದೆ. ಇದು ಮಾಧ್ಯಮದವರಿಗೆ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರ ಭಾವನೆ, ಜನಮಿಡಿತದೊಂದಿಗೆ ಮೋದಿಯವರು ಗೆಲ್ಲಲಿದ್ದಾರೆ. ನಾಯಕತ್ವ ಘೋಷಣೆ ಆಗುವ ಮೊದಲೇ ಮ್ಯಾಚ್ (ಚುನಾವಣೆ) ನಡೆಯಲಿದ್ದು, ಇಂಡಿ ಒಕ್ಕೂಟ ಸೋತು ಸುಣ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.ಕರ್ನಾಟಕದಲ್ಲೂ ನಮಗೆ ಒಳ್ಳೆಯ ವಾತಾವರಣ ಇದೆ. 10 ತಿಂಗಳಲ್ಲಿ 10 ತಪ್ಪು, 10 ಭ್ರಷ್ಟಾಚಾರಗಳನ್ನು, ಸಮಾಜದ್ರೋಹಿಯಾದ ಕೆಲಸಗಳನ್ನು ಕಾಂಗ್ರೆಸ್ ಮಾಡಿದೆ ಎಂದರು.

ಮಂಡ್ಯದಲ್ಲಿ ಹನುಮಧ್ವಜ ಇಳಿಸಿ ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರ ರಾಮಜನ್ಮಭೂಮಿಯ ಕೇಸನ್ನು 24 ವರ್ಷಗಳ ಬಳಿಕ ಕೆದಕಿ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಾರೆ. ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು, ಅವರು ಕಾಂಗ್ರೆಸ್ ಕಾರ್ಯಕರ್ತರೆಂದು ಸಾಬೀತಾಗಿದೆ ಎಂದು ತಿಳಿಸಿದರು.

RELATED ARTICLES

Latest News