ಮಧ್ಯಪ್ರದೇಶ, ರಾಜಸ್ತಾನದಲ್ಲಿ ಸಿಎಂ ಆಯ್ಕೆಗೆ ರಾಹುಲ್ ಕಸರತ್ತು
ನವದೆಹಲಿ, ಡಿ.13- ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೈ ವಶವಾಗಿರುವ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ನೂತನ ಮುಖ್ಯಮಂತಿಗಳ್ರ ಆಯ್ಕೆಗಾಗಿ ರಾಜಧಾನಿ ದೆಹಲಿಯಲ್ಲಿ ಕಸರತ್ತು ಮುಂದುವರಿದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಇಂದು ಮಹತ್ವದ ಸಭೆಯೊಂದನ್ನು ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಹಿರಿಯ ಮುಖಂಡ ಕಮಲ್ನಾಥ್ ಮತ್ತು ಯುವನಾಯಕ ಜೋತಿರಾದಿತ್ಯ ಸಿಂದಿಯಾ ಹಾಗೂ ರಾಜಸ್ತಾನದ ಸಿಎಂ ರೇಸ್ಗಾಗಿ ಪೈಪೆÇೀಟಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ರಾಜಸ್ತಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲೆಟ್ ಈಗಾಗಲೇ ದೆಹಲಿಯಲ್ಲಿದ್ದು, ಸಭೆಯಲ್ಲಿ ಭಾಗವಹಿಸಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಅನುಭವಿ ಹಿರಿಯ ರಾಜಕಾರಣಿಗಳಿಗೆ ಈ ಹುದ್ದೆಗಳನ್ನು ನೀಡಬೇಕೋ ಅಥವಾ ಉತ್ಸಾಹಿ ಯುವ ನೇತಾರರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕೋ ಎಂಬ ಜಿಜ್ಞಾಸೆಯಲ್ಲಿರುವ ರಾಹುಲ್ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸಂಜೆ ವೇಳೆಗೆ ಮಧ್ಯಪ್ರದೇಶ ಮತ್ತು ರಾಜಸ್ತಾನಕ್ಕೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಲಭಿಸಲಿದೆ.
ಸಭೆಗೂ ಮುನ್ನ ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದ ಪಕ್ಷದ ವೀಕ್ಷಕ ಎ.ಕೆ.ಆಂಟನಿ ಮತ್ತು ರಾಜಸ್ತಾನದ ವೀಕ್ಷಕ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸೂಕ್ತ ಅಭ್ಯರ್ಥಿ ಆಯ್ಕೆ ಕುರಿತು ರಹಸ್ಯ ಮಾಹಿತಿ ಪಡೆದುಕೊಂಡರು. ಎರಡೂ ರಾಜ್ಯಗಳಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಮತ್ತು ಹಿರಿಯ ಮುಖಂಡರಿಂದ ಅಭಿಪ್ರಾಯಗಳನ್ನು ಕಲೆ ಹಾಕಿರುವ ರಾಹುಲ್ ಇಂದು ಬೆಳಗ್ಗೆಯಿಂದಲೇ ಮುಖ್ಯಮಂತ್ರಿಗಳ ಆಯ್ಕೆ ಕುರಿತ ಮಹತ್ವದ ಮಂತ್ರಾಲೋಚನೆ ನಡೆಸಿದರು.ನಿನ್ನೆ ನಡೆದ ಸಿಎಲ್ಪಿ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ವೀಕ್ಷಕರು ರಾಹುಲ್ ಗಾಂದಿ ಅವರಿಗೆ ಈಗಾಗಲೇ ಸಲ್ಲಿಸಿದ್ದಾರೆ.
ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ಈ ಮೂರು ರಾಜ್ಯಗಳ ಶಾಸಕರು, ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಪಡೆದು ಪರಾಮರ್ಶೆ ನಡೆಸಲಾಗಿದೆ. ಇಂದು ಸಂಜೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಈ ಮಧ್ಯೆ ಛತ್ತೀಸ್ಗಢದ ನೂತನ ಮುಖ್ಯಮಂತ್ರಿ ಆಯ್ಕೆಗಾಗಿ ನಿನ್ನೆಯಿಂದ ರಾಯ್ಪುರ್ ಮತ್ತು ದೆಹಲಿಯಲ್ಲಿ ಕಸರತ್ತು ಮುಂದುವರಿದಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್ಪಿ) ಸಭೆ ನಡೆಯಲಿದೆ.
ಕಾಂಗ್ರೆಸ್ ಲೋಕಸಭಾ ಸದಸ್ಯ (ದುರ್ಗಾ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಿಯಾದ) ತಾಮರಧ್ವಜ್ ಸಾಹು, ಛತ್ತೀಸ್ಗಢ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಘೇಲ್ ಮತ್ತು ಹಿರಿಯ ಮುಖಂಡ ಟಿ.ಎಸ್.ಸಿಂಗ್ದೇವೊ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವ ತ್ರಿಮೂರ್ತಿಗಳಾಗಿದ್ದಾರೆ. ಈ ಸಂಬಂಧ ನಿನ್ನೆ ರಾತ್ರಿ ನಡೆದ ಸಿಎಲ್ಪಿ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕ ಎಂ.ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಎಐಸಿಸಿ ಉಸ್ತುವಾರಿ ಪಿ.ಎಲ್.ಪುನಿಯಾ ಮತ್ತು ಇತರ ನಾಯಕರು ಅಭಿಪ್ರಾಯಗಳನ್ನು ಸಂಗ್ರಹಿಸಿದ್ಧಾರೆ. ಛತ್ತೀಸ್ಗಢ ಮುಖ್ಯಮಂತ್ರಿ ಆಯ್ಕೆಯೂ ಇಂದು ಸಂಜೆ ವೇಳೆಗೆ ಪ್ರಕಟವಾಗುವ ನಿರೀಕ್ಷೆ ಇದೆ.