ಮಹದೇಶ್ವರನಿಗೆ ಮೂರು ಕಣ್ಣಿನ ಬೆಳ್ಳಿ ಆಭರಣ ಅರ್ಪಿಸಿದ ಎಸ್ಎಂಕೆ
ಹನೂರು, ಮಾ.7- ಮಾಜಿ ಮುಖ್ಯಮಂತ್ರಿ ಹಾಗೂ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣರವರು ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರ ಮಲೈ ಮಹದೇಶ್ವರಬೆಟ್ಟದ ಜಗದೊಡೆಯ ಮಾದಪ್ಪನಿಗೆ 1ಕೆಜಿ 110 ಗ್ರಾಂ ತೂಕದ ಮೂರು ಕಣ್ಣಿನ ಬೆಳ್ಳಿ ಆಭರಣಗಳನ್ನು ಕಾಣಿಕೆ ಅರ್ಪಿಸಿದ್ದಾರೆ. ಭಕ್ತರೊಬ್ಬರ ಮೂಲಕ ಬೆಳ್ಳಿ ಆಭರಣಗಳನ್ನು ಎಸ್.ಎಂ.ಕೃಷ್ಣ ಅವರು ಕಳುಹಿಸಿದ್ದಾರೆ ಎಂದು ಮಲೆ ಮಹದೇಶ್ವರ ದೇಗುಲ ಪ್ರಾಕಾರದ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ಮಹದೇಶ್ವರನಿಗೆ ಬೆಳ್ಳಿ ಆಭರಣ ಸಲ್ಲಿಸಿರುವ ಎಸ್.ಎಂ.ಕೃಷ್ಣ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಪ್ರಾಕಾರದ ಜಯ ವಿಭವ ಸ್ವಾಮಿ ಅವರು ಅಭಿನಂದನಾ ಪತ್ರ ಹಾಗೂ ದೇವರ ಪ್ರಸಾದ ನೀಡಿದ್ದಾರೆ. ಭೇಟಿ ಸಂದರ್ಭದಲ್ಲಿ ಬೆಟ್ಟದಲ್ಲಿ ಕೈಗೊಂಡಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳ ರೂಪುರೇಷೆಗಳ ಬಗ್ಗೆಯೂ ಇಬ್ಬರು ಚರ್ಚಿಸಿದ್ದಾರೆ.
ಮಹದೇಶ್ವರ ಬೆಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್.ಎಂ.ಕೃಷ್ಣ ಅವರು ಆದಷ್ಟು ಶೀಘ್ರ ಮಾದಪ್ಪನ ಸನ್ನಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.