Friday, April 19, 2024
Homeರಾಜ್ಯಸಕ್ಕರೆ ಕಾರ್ಖಾನೆ ಖಾಸಗಿ ಗುತ್ತಿಗೆ ಕುರಿತು ಪರಿಶೀಲನೆ : ಸಚಿವ ಶಿವಾನಂದ ಪಾಟೀಲ್

ಸಕ್ಕರೆ ಕಾರ್ಖಾನೆ ಖಾಸಗಿ ಗುತ್ತಿಗೆ ಕುರಿತು ಪರಿಶೀಲನೆ : ಸಚಿವ ಶಿವಾನಂದ ಪಾಟೀಲ್

ಬೆಂಗಳೂರು,ಡಿ.16- ಆರ್ಥಿಕವಾಗಿ ನಷ್ಟದಲ್ಲಿರುವ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ದೀರ್ಘಾವಧಿಯ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಲು ಪರಿಶೀಲಿಸಲಾಗಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದ್ದಾರೆ.

ಭೈಲಹೊಂಗಲ ಕ್ಷೇತ್ರದ ಶಾಸಕ ಮಹಂತೇಶ್ ಕೌಜಲಗಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ರಾಜ್ಯದಲ್ಲಿ 93 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದವು. ಅವುಗಳಲ್ಲಿ 76 ಕಾರ್ಯನಿರತವಾಗಿವೆ. 12 ಸ್ಥಗಿತಗೊಂಡಿವೆ. 5 ಮುಚ್ಚಿ ಹೋಗಿವೆ ಎಂದು ಸಚಿವರು ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ 1 ಕಾರ್ಖಾನೆ ಕಾರ್ಯನಿರತವಾಗಿದ್ದರೆ, ಮತ್ತೊಂದು ಸ್ಥಗಿತಗೊಂಡಿದೆ. ಇನ್ನೊಂದು ಕಾರ್ಖಾನೆಯನ್ನು ಪೂರ್ಣವಾಗಿ ಮುಚ್ಚಲಾಗಿದೆ. ಸಹಕಾರಿ ವಲಯದಲ್ಲಿ 13 ಕಾರ್ಖಾನೆಗಳು ಕಾರ್ಯನಿರತವಾಗಿದ್ದರೆ 4 ಮುಚ್ಚಿವೆ, ಇನ್ನೂ 4 ಸ್ಥಗಿತಗೊಂಡಿವೆ.

ಸಹಕಾರಿ ವಲಯದಲ್ಲಿ 9 ಕಾರ್ಖಾನೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಅಷ್ಟೂ ಚಾಲನೆಯಲ್ಲಿವೆ. ಖಾಸಗಿ ವಲಯದ 60 ಕಾರ್ಖಾನೆಗಳಲ್ಲಿ 53 ಚಾಲ್ತಿಯಲ್ಲಿದ್ದರೆ, 7 ಸ್ಥಗಿತಗೊಂಡಿವೆ ಎಂದು ಸಚಿವರು ವಿವರಿಸಿದ್ದಾರೆ.

ಐಎನ್‍ಎಸ್ ಸುದ್ದಿಸಂಸ್ಥೆಯ ಷೇರು ಖರೀದಿಸಿದ ಅದಾನಿ

ಮಂಡ್ಯದ ದಿ ಮೈ ಶುಗರ್ಸ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯಸರ್ಕಾರ 2020-21 ರಲ್ಲಿ 20.80 ಕೋಟಿ, ಪ್ರಸಕ್ತ ಸಾಲಿನಲ್ಲಿ 72.58 ಕೋಟಿ ಸೇರಿ 93.38 ಕೋಟಿ ರೂ.ಗಳನ್ನು ನೀಡಿದೆ. 2021-22 ನೇ ಸಾಲಿನಲ್ಲಿ ಯಾವುದೇ ಹಣ ನೀಡಿಲ್ಲ. 1933 ರಲ್ಲಿ ಸ್ಥಾಪಿಸಲಾದ ಈ ಕಾರ್ಖಾನೆ ಪ್ರಸ್ತುತ ರಾಜ್ಯಸರ್ಕಾರದ ಅೀಧಿನದಲ್ಲಿರುವ ಸಾರ್ವಜನಿಕ ಉದ್ಯಮವಾಗಿದೆ. ರಾಜ್ಯಸರ್ಕಾರ ಶೇ.89.39 ರಷ್ಟು ಷೇರುಗಳನ್ನು ಹೊಂದಿದೆ. ಕಂಪನಿಯ ಯಂತ್ರೋಪಕರಣಗಳ ವಿತರಣೆ, ಆಧುನೀಕರಣ, ದುಡಿಯುವ ಬಂಡವಾಳ ಮತ್ತು ನೌಕರರ ವೇತನ ಭತ್ಯೆಗಳಿಗೆ ರಾಜ್ಯಸರ್ಕಾರ ಕಾಲಕಾಲಕ್ಕೆ ಷೇರು, ಸಾಲ ಮತ್ತು ಸಹಾಯಧನದ ರೂಪದಲ್ಲಿ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಸಹಕಾರಿ ತಳಹದಿಯ ಮೇಲೆ ನಡೆಯುತ್ತಿರುವ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಿದ್ದಸಮುದ್ರದಲ್ಲಿನ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆ 137.05 ಕೋಟಿ, ಬೈಲಹೊಂಗಲದ ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲ್ಲಪ್ರಭ ಸಹಕಾರಿ ಸಕ್ಕರೆ ಕಾರ್ಖಾನೆ 146 ಕೋಟಿ, ಕಾಕತೀಯ ಶ್ರೀ ಮಾರ್ಕಂಡೇಯ ಸಕ್ಕರೆ ಕಾರ್ಖಾನೆ 112.43 ಕೋಟಿ ರೂ.ಗಳ ನಷ್ಟದಲ್ಲಿದೆ. ಕಬ್ಬು ಬೆಳೆಗಾರರ ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ನಷ್ಟದಲ್ಲಿರುವ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

Latest News