Friday, April 26, 2024
Homeಜಿಲ್ಲಾ ಸುದ್ದಿಗಳುಹನುಮ ಭಕ್ತರ ಮೇಲೆ ಬೊಲೇರೊ ವಾಹನ ಹರಿದು ಮೂವರ ಸಾವು

ಹನುಮ ಭಕ್ತರ ಮೇಲೆ ಬೊಲೇರೊ ವಾಹನ ಹರಿದು ಮೂವರ ಸಾವು

ರಾಯಚೂರು,ಏ.23- ಹನುಮ ಜಯಂತಿ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಿಂದ ನೀರು ತರಲು ತೆರಳುತ್ತಿದ್ದ ಭಕ್ತರ ಮೇಲೆ ಬೊಲೇರೊ ವಾಹನ ಹರಿದ ಪರಿಣಾಮ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಶಕ್ತಿನಗರದ ಮೈಸೂರು ಪೆಟ್ರೋ ಕೆಮಿಕಲ್ಸ್ ಫ್ಯಾಕ್ಟರಿ ಹತ್ತಿರ ಇಂದು ಬೆಳಗಿನ ಜಾವ ಸಂಭವಿಸಿದೆ.

ಹೆಗ್ಗಸನಹಳ್ಳಿ ಗ್ರಾಮದ ಅಯ್ಯನಗೌಡ (29), ಮಹೇಶ್ (24) ಮತ್ತು ಉದಯ್‍ಕುಮಾರ್ ಮೃತ ದುರ್ದೈವಿಗಳು. ಇಂದು ಹನುಮಜಯಂತಿ ಪ್ರಯುಕ್ತ ಗ್ರಾಮದಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ 10 ಜನ ಸೇರಿ ಶಕ್ತಿನಗರದ ಹತ್ತಿರದಲ್ಲಿರುವ ಕೃಷ್ಣಾ ನದಿಯಿಂದ ಪೂಜೆಗೆಂದು ನೀರು ತರಲು ಬೆಳಗಿನ ಜಾವ ಹೊರಟಿದ್ದರು.

ಈ ಸಮಯದಲ್ಲಿ ಬೊಲೇರೊ ವಾಹನ ಇವರ ಮೇಲೆ ಹರಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಗಾಯಗೊಂಡಿರುವ ಇನ್ನಿಬ್ಬರಲ್ಲಿ ಒಬ್ಬರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಮತ್ತೊಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನಾ ಸ್ಥಳಕ್ಕೆ ಶಕ್ತಿನಗರ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹನುಮಜಯಂತಿಯಂದೇ ಪೂಜೆಗೆ ನೀರು ತರಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಗ್ಗಸನಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿ ಸೂತಕ ಮನೆಮಾಡಿತ್ತು.

RELATED ARTICLES

Latest News